ಅಲ್ಲೊಂದು ಊರು. ಮಹರಾಶ್ಟ್ರನಾಡಿನ ಕೊಲ್ಲಾಪುರದ ಹತ್ತಿರ ಇದೆ. ಪುಣೆ ಬೆಂಗಳೂರಿ ರಾಶ್ಟ್ರೀಯ ಹೆದ್ದಾರಿಯಿಂದ ಒಂದು ಗಾವುದಶ್ಟು ನಡೆದರೆ ಕನ್ನೇರಿ ಮಟ ಸಿಗುವುದು. ಬಾರತದ ಹಳ್ಳಿ ಬದುಕನ್ನು ತೋರ್ಪಡಿಸು ಒಂದು ಅಪರೂಪದ ಸಿದ್ದಗಿರಿ ತೋರ್ದಾಣ (ಸಿದ್ದಗಿರಿ ಪ್ರದರ್ಶನಾಲಯ)(SIDDHAGIRI MUSEUM). ಇದು ಕಾಡಸಿದ್ದೇಶ್ವರ ಸ್ವಾಮೀಜಿಯವರ ಕನಸಿನ ಕೂಸು. ಗಾಂದಿ ಕಂಡ ಬಾರತದ ಹಳ್ಳಿಯ ಕನಸನ್ನು ಹಾಗು ಅಲ್ಲಿನ ಬದುಕನ್ನು ತೋರಿಸುವ ಒಂದು ಸೊಬಗಿನ ತೋರ್ದಾಣ.
ಆ ತೋರ್ದಾಣದ ಕೆಲವು ತಿಟ್ಟಗಳನ್ನು (ಪೋಟೋ)ಗಳಿವೆ ನೋಡಿ.

ಆ ಸೊಬಗಿನ ತಾಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮಿಂಬಲೆ (ಇಂಟರ್ನೆಟ್) ತಾಣದ ಕೊಂಡಿ ತೆರೆದು ನೋಡಿ. http://www.siddhagirimuseum.org/


ಅಕ್ಕಸಾಲಿಗ...............

ಬೇನೆಗೆ ಮದ್ದುಕೊಡುವುದು....................


ಕವುದಿ ಹೊಲೆಯುವ ಅಜ್ಜಿ....

ಕುಂಡಲಿ ನೋಡುವುದು...........

ಕೆರೆಗಾರ...(ಕ್ಷೌರಿಕ).................

ಮೇದಾರ..............

ಗವುಲಿ (ಶಾವಿಗೆ) ಹೊಸೆಯುವುದು.............
ಕಲ್ಲುಗಾರ(ವಡ್ಡ)................(ಬೀಸೋಕಲ್ಲು, ಒಳಕಲ್ಲು)..
ಹಳ್ಳಿ ಅಂಗಡಿ..............
ಮೀನುಗಾರ ಬಲೆಯೊಂದಿಗೆ.......
ಊರ ಅರಳಿ ಕಟ್ಟೆ ಇಲ್ಲಿ ಆಲದ ಕಟ್ಟೆ....
ಊರಿಗೊಂದೇ ಬಾವಿ....ನೀರು ಸೇದುವುದು................ಗಾಣಿಗ..............

ನಾಡ ಆಕಳು........
ಏತ (ಕಪ್ಲಿ)...........ಒಕ್ಕಲಿ(ಕಣಕಟ್ಟುವುದು).............

ಎಡೆ ಹಾಕುವುದು................

ಹಾಯೆ(ತಿಟ್ಟ)(ಪೋಟೋ).....ನೆರವು ತಿರುಗಾಡುವ ಮಿಂಚೊಲೆ( from forword mail)


ಇಂದು ನಸುಕಿನಲ್ಲಿ ಚೀನಾದಲ್ಲಿರುವ ನನ್ನೊಬ್ಬ ಗೆಳೆಯನಿಗೆ ಅವನ ಹಾಗು ಹೋಗುಗಳನ್ನು ಕೇಳುತ್ತ ಮಿಂಚೋಲೆ (ಇ-ಮೇಲ್) ಕಳಿಸಿದೆ. ಅದಕ್ಕೆ ಅವನು ಮರು ಮಿಂಚೋಲೆ ಕಳಿಸಿದ. ಅವನು ಕನ್ನಡ ಕುವರನಾಗಿದ್ದರು, ಪಿರಿಕನ್ನಡದ ಕಯ್ವಾರಿ(ಅಬಿಮಾನಿ)ಯಾಗಿದ್ದೂ ತನ್ನ ಎದುರೋಲೆಯಲ್ಲಿ ಬಳಸಿದ ಒಂದು ಸಕ್ಕದ ಒರೆ(ಪದ) ನನ್ನೊಳಗೆ ಮಲಗಿದ್ದ ಕನ್ನಡತನವನ್ನು ಕೆಣಕುವಂತೆ ಮಾಡಿತು. ಸಿಡಿದೆದ್ದ ನನ್ನ ಕನ್ನಡತನ ಅವನು ಬಳಸಿದ ಸಕ್ಕದ ಒರೆಗಳನ್ನೇ ಬಳಸಿ ಈ ಕೆಳಗಿನಂತೆ ಬರೆದು ಉತ್ತರಿಸುವಂತೆ ಮಾಡಿತು.

'ಮಹಿಳೆ' 'ಪುರುಷ' ಎಂದು ಸಕ್ಕವನುಲಿಯುತ
ಕನ್ನಡವನು ಕೀಳಾಗಿ ಏಳಿಲಸದಿರು ಗೆಳೆಯ
ಮಹಿಳೆಗೆ 'ಹೆಂಗಸುಂಟು' ಪುರುಷನಿಗೆ 'ಗಂಡಸುಂಟು'
ಅರಿತು ಸಿರಿ ಕನ್ನಡವನಾಡು ಮಂಕುತಿಮ್ಮ


ಏಳಿಲ-ಅವಮಾನ

ಹಿರಿಯರಾದ ಗುಂಡಪ್ಪರಲ್ಲಿ ಮನ್ನಿಸೆಂದು ಕೋರುತ್ತ....

ನನ್ನ ಈ ಪಿರಿಕನ್ನಡ ಕಯ್ವಾರ(ಅಬಿಮಾನ)ವನ್ನು ಎಲ್ಲಾ ಕನ್ನಾಡಿಗ ಗೆಳೆಯರಲ್ಲಿ ಹಂಚಿಕೊಳ್ಳುವ ಹುಚ್ಚು ಹುಂಬತನದಿಂದ ಇದನ್ನು ಇಲ್ಲಿ ಬರೆದು ನಿಮಗೆಲ್ಲ ಕಳಿಸುತ್ತಿರುವೆ.



"ನಾನು ಕನ್ನಡಿಗ ಇದಕ್ಕಿಂತ ಹೆಚ್ಚುಗಾರಿಕೆ ಎನಗಿನ್ನೊಂದಿಲ್ಲ"


ಕುಕೂಊ...
ಕುಮಾರಸ್ವಾಮಿ. ಕಡಾಕೊಳ್ಳ
ಪುಣೆ
26/12/08

ಬ್ಲಾಗ್ ಲೋಕದಲ್ಲಿ ತಿರಿಗಾಡುತ್ತಿರುವಾಗ ನನಗೊಂದು ಅನುಬವ ಬರಹ ಸಿಕ್ಕಿತು. ಆ ಬರಹಕ್ಕೆ ತಲೆನಾಮ ಕನ್ನಡ ಇಂಬ್ಲೀಚ್ ಬೆರೆಕೆಯಲ್ಲಿ ಈಗೆ ಬರೆಯಲಾಗಿತ್ತು "ನನ್ನ Some ಶೋಧನೆ!!" ಈ ಬರಹ ಓದಿದೊಡನೆಯೇ ನಾನು ಎಂಟನೆಯ ತರಗತಿಯಲ್ಲಿ ಓದುತ್ತಿದ್ದಾಗ ಮಾಡಿದ ಪ್ರಯೋಗದ ನೆನಪು ಬಂತು. ಹೊಸದಾಗಿ ನನ್ನ ಪಕ್ಕದೂರಾದ ಚಿಕ್ಕಜೋಗಿಹಳ್ಳಿಯ ಹಯಸ್ಕೂಲ್ ಶಾಲೆಗೆ ಸೇರಿದ್ದೆ. ದಿನಾಲು ನಾಲ್ಕು ಹರದಾರಿ ನಡೆದು ಮತ್ತೇ ಸಂಜೆ ಅಶ್ಟೇದೂರ ನಡೆದು ಮರಳಿ ಬರುತ್ತಿದ್ದೆವು. ಮನೆಗೆ ಬರುವುದರೊಳಗೆ ಕತ್ತಲು ಕವಿಯುತ್ತಿತ್ತು. ಹೊಸದಾಗಿ ದೊಡ್ಡ ಶಾಲೆಗೆ ಸೇರಿದ ಹುರುಪು. ಹೊಸ ತರಗತಿ, ಹೊಸ ಮಾಸ್ತರು, ಹೊಸ ಊರು ಎಲ್ಲದೂ ಹೊಸದಾಗಿ ಕಾಣುತಿತ್ತು.

ಅಂದಿನ ದಿನಗಳಲ್ಲಿ ಲೆಕ್ಕದ ಜೊತೆ ವಿಗ್ನಾನವೆಂದರೆ ನನಗೆ ಹೆಚ್ಚು ಅಚ್ಚು ಮೆಚ್ಚು. ವಿಗ್ನಾನದ ಪಾಟ ಹೇಳಲು ಬರುತ್ತಿದ್ದ ಜಯಮೂರ್ತಿ ಮಾಸ್ತರು ನನ್ನ ನೆಚ್ಚಿನ ಗುರುಗಳು. ಅವರಿಗೆ ನಾನು ನೆಚ್ಚಿನ ವಿದ್ಯಾರ್ತಿ. ಹಿಂದಿನ ದಿನ ಹೇಳಿಕೊಟ್ಟ ಪಾಟದ ಬಗ್ಗೆ ದಿನಾಲು ಮೊದಲು ಪ್ರಶ್ನೆ ಕೇಳಿ ಮುಂದಿನ ಪಾಟ ಶುರುಮಾಡುತ್ತಿದ್ದರು. ಹುಡುಗರಲ್ಲಿ ಯಾರು ಉತ್ತರ ಹೇಳದಿದ್ದಾಗ ನನ್ನ ಸರದಿ ಬರುತ್ತಿತ್ತು. ಯಾವತ್ತೂ ಜಯಮೂರ್ತಿ ಮಾಸ್ತರು ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಹೇಳುವುದರಲ್ಲಿ ನಾನು ಸೋತಿರಲಿಲ್ಲ. ಆಗ ಉತ್ತರ ಹೇಳದಿದ್ದ ನನ್ನ ಸಹಪಾಟಿ ಹುಡುಗರಿಗೆ ಮೂಗಿಡಿದು ಕಪಾಳಕ್ಕೆ ಹೊಡೆಯುವ.....

ಒಂದು ದಿನ ಜಯಮೂರ್ತಿ ಮಾಸ್ತರು ವಿದ್ಯತ್ ಬಗ್ಗೆ ಪಾಟ ಮಾಡುತ್ತಿದ್ದರು. ವಾಹಕ, ಅರೆವಾಹಕ, ನಿರೋದಕ, ಕರೆಂಟ್, ವೋಲ್ಟೇಜ್ ರೆಜಿಶ್ಟೆಂಟ್ ಇನ್ನೇನನ್ನೋ ಬಿಡಿಸಿ ಹೇಳುತ್ತಿದ್ದರು. ಮನೆಯಲ್ಲಿ ತುಂಬಾ ಮೊಸರು. ಬೆಳಿಗ್ಗೆಯ ಊಟಕ್ಕನೇ ಮೊಸರು ಮುದ್ದೆ, ಮೊಸರು ಬಾನ(ಅನ್ನ) ಹೊಟ್ಟೆ ಬಿರಿಯುವಂತೆ ಹಣಿದು ಬಂದಿದ್ದೆ. ಜೊಗೆತೆ ಒಂದು ಅಚ್ಚುಂಡೆ ಬೆಲ್ಲ ಒಣಕೊಬ್ಬರಿ ಹಾದಿಗುಂಟ ತಿನ್ನುತ್ತ ಬಂದಿದ್ದೆ. ಮೊಸರಿನ ಪ್ರಬಾವವೇ ಇರಬೇಕು ಜೊತೆಗೆ ಸುಯ್ಯಂದು ಮರದ ನೆರಳನ್ನು ಸೀಳಿ ಬೀಸುತ್ತಿದ್ದ ತಣ್ಣನ ತಂಗಾಳಿ ಕಿಟಕಿಯಿಂದ ಒಳಗೆ ನುಗ್ಗಿ ನನ್ನ ಸವರಿಕೊಂಡು ಹೋಗುತ್ತಿದ್ದುದ್ದರಿಂದ ಹಾಯ್ ಎನಿಸುತ್ತಿತ್ತು. ಮೂರನೆ ಬೆಂಚಿನಲ್ಲಿ ತೂಕಡಿಸುತ್ತ ಕೂತಿದ್ದೆನೋ ಎನೋ. ಮಾಸ್ತರು ನನ್ನ ಕಡೆ ಅಲ್ಲಾಡಿಸುತ್ತ ಕೋಲು ತೋರಿಸಿದರು. ಮಾಸ್ತರ ಕಯ್ಯಲ್ಲಿ ಅಲ್ಲಾಡುತ್ತಿದ್ದ ಕೋಲು ನಿದ್ದೆ ತುಂಬಿದ ಅರೆಗಣ್ಣಿನಲ್ಲಿ ನೋಡಿದೊಡನೆಯೇ ಇದ್ದಕ್ಕಿದ್ದಂತೆ ಯಾಕೋ ಒಂದ್ತಾರ ಆಯ್ತು. ಅವರು ಎಲ್ಲರ ನಡುವೆ ನನ್ನನ್ನು ಎಬ್ಬಿಸಿದರೆ ಅವಮಾನವಾಗುವುದೆಂದೆನಿಸಿರಬೇಕು ನನಗಾಗ. ನನ್ನ ನೆಚ್ಚಿನ ಮಾಸ್ತರು ತರಗತಿಯಲ್ಲಿ ಎಬ್ಬಿಸಿ ಎಲ್ಲರೆದುರು ಅವಮಾನಮಾಡಿದರೆ? ತುಂಬಾ ಅವಮಾನದ ಮಾತಿದು. ಇದನ್ನು ಏಗಾದರು ಏನಾದರು ಮಾಡಿ ತಪ್ಪಿಸ ಬೇಕು!!! ತಡಮಾಡದೆ ಮರುಗಳಿಗೆಯಲ್ಲಿ ತಟ್ಟನೆ ಎದ್ದು ನಿಂತು ನಾನು ಮಾಸ್ತರಿಗೆ ಒಂದು ಪ್ರಶ್ನೆ/ಸಂಶಯ ಕೇಳಿ ಆಗುವ ಅವಮಾನದ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ.

ನಾನು ಕೇಳಿದ ಪ್ರಶ್ನೆಯಿಂದ ತರಗತಿಯಲ್ಲಿರುವ ಹುಡುಗರೆಲ್ಲರಿಗೂ ಗಾಬರಿನೇ. ಗಾಬರಿಯಾಕೆ ಗೊತ್ತ ಇದುವರೆಗು ತರಗತಿಯಲ್ಲಿ ಎದ್ದು ಮಾಸ್ತರಿಗೆ ಪ್ರಶ್ನೆ ಕೇಳಿ ಸಂಶಯ ಬಗೆಹರಿಸಿಕೊಳ್ಳುವ ಎದೆಗಾರಿಕೆ ಯಾರಿಗೂ ಇರಲಿಲ್ಲ ಅತವ ಯಾರಿಗೂ ಈಬಗೆ ಪ್ರಶ್ನೆಕೇಳುವಂತ ಸಂಶಬ ಬರುತ್ತಿತ್ತೋ ಇಲ್ಲವೋ.. ನನಗಂತು ಬರುತ್ತಿರಲಿಲ್ಲ. ನನ್ನ ಬದುಕಲ್ಲೇ ಇದೇ ಮೊದಲ ಹಾಗು ಕೊನೆಯ ಪ್ರಶನ್ಎ. ಮೊದಲನೆಯ ಪ್ರಶ್ನೆಗೆ ಮಾಸ್ತರು ಸೊಗಸಾಗಿ ಉತ್ತರಿಸಿದರು. ಎಲ್ಲರಿಗೂ ಚನ್ನಾಗಿ ತಿಳಿಯಿತು ಆದರೆ ನಾನು ಕುತೂಹಲದಿಂದ ಅವರ ವಿವರಣೆಗೆ ಎದುರಾಗಿ ಇನ್ನೊಂದು ಪ್ರಶ್ನೆ ಕೇಳಿದೆ. ಮೊದಲನೆಯ ಪ್ರಶ್ನೆ ಈಗಿತ್ತು. ಕರೆಂಟ್ ಇರೋ ವಯರು ಮುಟ್ಟಿದರೆ ಯಾಕೆ ಶಾಕ್ ಹೊಡೆಯುತ್ತೆ? ಜೊತೆಗೆ ಕರೆಂಟು ಹಿಡಿದ ಜೀವಿ ಯಾಕೆ ಸಾಯುತ್ತದೆ? ಜಯಮೂರ್ತಿ ಮಾಸ್ತರು ಸೊಗಸಾಗಿ ಎಲ್ಲರಿಗೂ ತಿಳಿಯುವಂತೆ ಬಿಡಿಬಿಡಿಸಿ ಹೇಳಿದರು. ನಮ್ಮ ಮೈಯ್ಯೊಳಗೆ ನರನಾಡಿ ಇರುತ್ತಾವೆ. ಅದರಲ್ಲಿ ವಿದ್ಯತ್ ಹರಿಯುತ್ತಿರುತ್ತದೆ. ಅದು ಅತಿ ತುಸು ಮಾತ್ರ. ಹೆಚ್ಚಿನ ಕರೆಂಟ್ ನಮ್ಮ ಮೈಯ್ಯೋಳಗೆ ಹರಿದಾಗ ನಮ್ಮ ಮಯ್ಯಲ್ಲಿ ಇರುವ ವಿದ್ಯತ್ತಿನ ಬಲೆ ಶಾರ್ಟ್ ಆಗಿ ಎಲ್ಲಾ ಕೆಲಸಗಳನ್ನು ನಿಲ್ಲಿಸಿ ಬಿಡುತ್ತದೆ. ಈಗೆ ಆಗದಿರಲೆಂದು ನಮ್ಮ ಮೆದುಳು ಕರೆಂಟಿರುವ ತಂತಿ ಮುಟ್ಟಿದಾದ ತಪ್ಪಿಸಿಕೊಳ್ಳಲು ಕೈಗೆ ಒಂದು ಮಾತನ್ನು ಹೇಳಿಕಳಿಸುತ್ತದೆ. ಕೊಸರಿ ತಂತಿಯಿಂದ ದೂರವಾಗು ಎಂದು ಅದೇ ಶಾಕ್ ಎಂದು ಬಿಡಿಸಿ ಹೇಳಿದರು. ಸರಿಯೆಂದು ಸೋಜಿಗದಿಂದ ಎಲ್ಲರೂ ತಲೆತೂಗಿದೆವು.

ಆದರೆ ಇದ್ದಕ್ಕಿದ್ದಂತೆ ನನ್ನ ಕೊಳಕು ತಲೆಯಲ್ಲಿ ಇನ್ನೇನೋ ನೆನಪಿಗೆ ಬಂತು. ಬೆಳಗಾದರೆ ಸಾಕು ನಮ್ಮ ಮನೆಯ ಮುಂದೆ ಲೈಟ್ ಕಂಬಕ್ಕೆ ಬಿಗಿದು ಕಟ್ಟಿರುವ ಕರೆಂಟ್ ತಂತಿಯ ಮೇಲೆ ನೂರಾರು ಗುಬ್ಬಚ್ಚಿ, ಬೆಳ್ಳಕ್ಕಿ, ಕಾಗೆ, ಬೆಳವ, ಪಾರಿವಾಳ ಕೂರುತ್ತಾವೆ. ಅದರ ಮೇಲೆನೇ ಜಗಳವಾಡುತ್ತಾವೆ. ಕಾ,... ಕೀ, ....ಪೀ,... ಚೀ.... ಮಾಡ್ತಾವೆ. ಕೆಲವು ಅದರ ಮೇಲೆ ಕುಳಿತೇ ನಿದ್ದೆ ಮಾಡ್ತಾವೆ ಆದರೆ ಆ ಯಾವಾ ಬೆಳ್ಳಕ್ಕಿಗೂ, ಗುಬ್ಬಚ್ಚಿಗೂ, ಕಾಗೆ, ಪಾರಿವಾಳಕ್ಕೆ ಇದುವರೆಗೆ ಕರೆಂಟ್ ಶಾಕೇ ಹೊಡೆದಿಲ್ಲ! ನಮ್ಮೂರಿನ ಮಾತು ಬಾರದ ಕಿವಿಯೂ ಕೇಳಿಸದ ಮೂಕ ಚಂದ್ರ ಯಾವಾಗಲು ಬರಿಗಯ್ಯಿಂದಲೇ ತಂತಿ ಮುಟ್ಟುತ್ತಾನೆ. ನಮ್ಮೂರಿನವರೆಲ್ಲ ಮನೆಯಲ್ಲಿ ಏನಾದರು ವಿದ್ಯತ್ತಿನ ತೊಂದರೆಯಾಗಿದ್ದೆರೆ ಅವನನ್ನೇ ಕರೆದುಕೊಂಡು ಹೋಗ್ತಾರೆ. ಅವನಿಗೆ ಯಾವತ್ತೂ ಶಾಕ್ ಹೊಡೆದಿಲ್ಲ. ಮಾತಾಡುವ ನಮಗೊಂದೇ ಯಾಕೆ ಶಾಕ್ ಹೊಡೆಯುತ್ತೆ ಎಂದು ತಲೆಯಲ್ಲಿ ಸುಳಿದಿದ್ದೇ ತಡ. ಮತ್ತೆ ಮೇಲೆದ್ದು ಮಾಸ್ತರಿಗೆ ನನ್ನ ಕೊರಗು ಹೇಳುತ್ತ ಸಾರ್ ಕರೆಂಟ್ ಬರೀ ಮಾತಾನಾಡುವ ಮನುಶ್ಯರಿಗೋಂದೇನ ಹೊಡೆಯೋದು?? ಎಂದು ಕೇಳಿದೆ.

ಮತ್ತೇ ನನ್ನ ನೆಚ್ಚಿನ ಜಯಮೂರ್ತಿ ಮಾಸ್ತರ್ ತಮ್ಮ ಬಹು ಸೊಗಸಾದ ತಾಳ್ಮೆಯ ಶೈಲಿಯಲ್ಲಿ ಬಿಡಿಬಿಡಿಯಾಗಿ ಬಿಚ್ಚಿ ಬಿಡಿಸಿ ಮುಂದುವರಿಸಿ ಹೇಳಿದರು. ಕರೆಂಟ್ ನಮ್ಮ ಮಯ್ಯಯಿಂದ ಹರಿದು ಇನ್ನೊಂದು ವಾಹಕಕ್ಕೆ ನಂಟಾಗಿ ಹರಿದಾಗ ನಮಗೆ ಹೊಡೆಯುತ್ತದೆ. ಇಲ್ಲದಿದ್ದರೆ ಹೊಡೆಯುವುದಿಲ್ಲ. ನೋಡು ತಂತಿಮೇಲೆ ಕೂಡೋ ಹಕ್ಕಿ ಬೇರೆ ಯಾವುದೇ ವಾಹಕ್ಕಕ್ಕೆ ಅಂಟಿಕೊಂಡಿರುವುದಿಲ್ಲ. ಅದಕ್ಕೆ ಅವಕ್ಕೆ ಹೊಡೆಯುವುದಿಲ್ಲ. ನಾವು ಕರೆಂಟ್ ಇರುವ ತಂತಿ ಹಿಡಿದಾಗ ನಮಗೂ ಕೂಡ ಯಾವುದೇ ವಾಹಕದ ನಂಟು ಇಲ್ಲದಿದ್ದರೆ ಹೊಡೆಯುವುದಿಲ್ಲ. ಉದಾಹರಣೆಗೆ ಒಣಮರದ ಹಲಗೆಯ ಮೇಲೆ ನಿಂತಾಗ ಪ್ಲಾಸ್ಟಿಕೂ, ರಬ್ಬರೂ ಮೆಟ್ಟು ಹಾಕಿಕೊಂಡಾಗ ನಾವು ಕರೆಂಟ್ ತಂತಿ ಹಿಡಿದರೆ ಹೊಡೆಯಲ್ಲ. ಆಗ ನನಗೆ ನೆನಪಾಯಿತು ಮೂಕ ಚಂದ್ರ ಯಾವಾಗಲು ಪ್ಯಾರಗಾನ್ ಮೆಟ್ಟು ಹಾಕಿಕೊಂಡಿರುತ್ತಿರುವುದು ಇಲ್ಲವೆ ಹಲಗೆಯ ಮೇಲೆ ನಿಂದು ವಯರ್ ಮುಟ್ಟುವುದು. ಕೊನೆಗೆ ಮಾಸ್ತರು ಒಂದು ಎಚ್ಚರಿಕೆಯನ್ನೂ ಕೊಟ್ಟರು. ಮಯ್ ಬೆವರೊಡೆದಿದ್ದರೆ ಕರೆಂಟು ಹೊಡೆಯುತ್ತದೆ. ಯಾಕೆಂದರೆ ಬೆವರಿನಲ್ಲಿ ನೀರಿದೆ, ನೀರು ವಾಹಕ ಅಂದರೆ ನೀರಿಗೆ ನಮ್ಮ ಮುಕಾಂತರ ಕರೆಂಟ್ ಹರಿದಾಗ ನಮಗೆ ಹೊಡೆಯುತ್ತೆ ಎಂದು ಹೇಳಿದರು.

"ಕರೆಂಟು ಹರಿದಾಡುವ ಮನುಶ್ಯನಿಂದ ಇನ್ನೊಂದು ವಾಹಕಕ್ಕೆ ನಂಟು ಇಲ್ಲದಿದ್ದಾಗ ಕರೆಂಟು ಹೊಡೆಯುವುದಿಲ್ಲ" ಮಾಸ್ತರ ಈ ಮಾತು ನನ್ನ ತಲೆಯಲ್ಲಿ ಮಾರುಲಿಯ(ಮಾರ್ದನಿ) ತೊಡಗಿತು. ಅದೇ ಗುಂಗು ನನ್ನ ತಲೆಯಲ್ಲಿ ನಿಂತಲ್ಲಿ ಕುಂತಲ್ಲಿ ಕೊರೆಯ ತೊಡಗಿತು. ಕರೆಂಟು ಕಂಬ, ಅದಕ್ಕೆ ಕಟ್ಟಿದ ತಂತಿ ನೋಡಿದರೆ ಸಾಕು ಮುಟ್ಟಿ ನೋಡೋಣವೇ ಎನ್ನಿಸುತ್ತಿತ್ತು. ಹಾಗೆಂದುಕೊಂಡು ಕರೆಂಟು ಕಂಬಕ್ಕೆ ಕಟ್ಟಿದ್ದ ಗಯ್ವಯರನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದೆ. ಉದ್ದವಾದ ಜೋಟಿ ಬಡಿಗೆಯಂತ ಒಣ ಕಟ್ಟಿಗೆಯನ್ನು ಹಿಡಿದು ತಂತಿಗೆ ತಾಗಿಸುತ್ತಿದ್ದೆ. ಹತ್ತಾರು ಬಗೆಯ ಪಲುಕು(ಕಲ್ಪನೆ) ನನ್ನಲ್ಲಿ ಬಂದೋಗುತ್ತಿದ್ದವು. ಪಲುಕಿನ ಮಿಡಿತ್ತಕ್ಕೆ ಹೊಂದುವ ಹಾಗೆ ಬಗೆ ಬಗೆಯಲ್ಲಿ ಏನೇನೋ ಮಾಡತೊಡಗಿದೆ. ಒಣ ಕಟ್ಟಿಗೆಯ ತುದಿಗೆ ತಂತಿ ಕಟ್ಟಿ ಜೋತಾಡುವ ತಂತಿಗೆ ತಾಗಿಸುತ್ತಿದ್ದೆ. ಏನು ಮಾಡಿದರೂ ತಣಿಯದ ಹುಳ ತಲೆಯನ್ನು ಚನ್ನಾಗಿ ತಿನ್ನ ತೊಡಗಿತು.

ಈ ಪ್ರಯೋಗ ಸಿದ್ದ ಮಾಡಲು ಒಂದು ನಲ್ ದಿನ ಬಂದೇ ಬಿಟ್ಟಿತು. ನನಗಿಂತ ಹಿರಿಯ ಗೆಳೆಯ ಹುಳ್ಳೇರ ಮಲ್ಲಿ ಹಾಗು ನಾನು ಒಮ್ಮೆ ನಮ್ಮ ತೊಟಕ್ಕೆ ಹೋಗಿದ್ದೆವು. ಮೋಟರು ಯಾಕೋ ನಡೆಯದೆ ಮನಿಸಿಕೊಂಡಿತ್ತು. ಪ್ಯೂಜ್ ಜೋಡಣೆ ತಪ್ಪಿರಬಹುದೇ ಎಂದು ನೋಡಲು ಮಲ್ಲಿ ತೋಟದ ಮನೆಯಲ್ಲಿ ಮೋಟರು ಸುರುಮಾಡಲು ಇರುವ ಸ್ಟಾಟರ್ ಹಲಗೆಯಮೇಲೆ(ಬೋರ್ಡ್) ಜೋಡಿಸಿದ ಪ್ಯೂಜ್ ಕಿತ್ತ. ಪ್ಯಾರಗಾನು ಅವಾಯಿ ಚಪ್ಪಲಿ ಹಾಕಿಕೊಂಡು ಬರಿ ಕೈಯಲ್ಲೇ ಎಲ್ಲಾ ತಂತಿಗಳನ್ನು ಮುಟ್ಟಿ ನೋಡುತ್ತ ತಿರುವುತ್ತ ತನ್ನ ಎದೆಗಾರಿಕೆಯನ್ನು ತೋರಿಸ ತೊಡಗಿದ. ನಾನು ಅವನ ಹಿಂದೆ ಸುಮ್ಮನೆ ಕಣ್ಣರಳಿಸಿ ಹೊರಳಿಸಿ ನೋಡುತ್ತ ನಿಂತಿದ್ದೆ. ಮತ್ತೆ ಅದೇ ಮಾತು, ನನ್ನ ನೆಚ್ಚಿನ ಜಯಮೂರ್ತಿ ಮಾಸ್ತರು ಹೇಳಿದ ಮಾತು ತಟ್ಟನೆ ತಲೆಯಲ್ಲಿ ಸುಳಿಯಿತು. "ಕರೆಂಟು ಹರಿದಾಡುವ ಮನುಶ್ಯನಿಂದ ಇನ್ನೊಂದು ವಾಹಕಕ್ಕೆ ನಂಟು ಇಲ್ಲದಿದ್ದಾಗ ಕರೆಂಟು ಹೊಡೆಯುವುದಿಲ್ಲ" ಈ ಮಾತು ನೆನಪಾದೊಡನೆಯೇ ಸರಿ ನೋಡೋಣ ಮಲ್ಲಿಗೆ ಈಗ ಯಾವುದೇ ವಾಹಕಕ್ಕೆ ನಂಟಿಲ್ಲ ಅದಕ್ಕೆ ಕರೆಂಟು ಹೊಡೆಯುತ್ತಿಲ್ಲ. ಈಗ ನಾನು ಅವನನ್ನು ಮುಟ್ಟಿದರೆ? ಎಂಬ ಪಲುಕು ನನ್ನ ತಲೆಯಲ್ಲಿ ಬಂದೊಡನೆಯೇ..... ಮೆಲ್ಲನೆ ಕೈ ಎತ್ತಿ ಅವನ ಬುಜದ ಮೇಲಿಡಲೋದೆ. ಕೊಂಚ ಅಳುಕೆನಿಸಿತು. ಸರಕ್ಕನೆ ಕೈ ಹಿಂದಕ್ಕೆಳೆದುಕೊಂಡೆ. ಕಕ್ಕಾಬಿಕ್ಕಿಯಾದವನಂತೆ ಆಕಡೆ ಈಕಡೆ ನೋಡುತ್ತ ಕೂತೆ. ಹಾಗೆ ಕೊಂಚಹೊತ್ತು ಸಾವರಿಸಿಕೊಂಡು ಹೊಂಚುಹಾಕಿ ಕುಂತುಕೊಂಡು ಕಣ್ಣು ಮುಚ್ಚಿ ದೈರ್ಯ ತಂದುಕೊಂಡು ಮೆಲ್ಲನೆ ಕೈ ಎತ್ತುತ್ತ ಅವನ ಬುಜದ ಮೇಲೆ ಇಟ್ಟೆ. ಇಟ್ಟೊಡನೆಯೇ ಮಲ್ಲಿ ಸರಕ್ಕನೆ ಪ್ಯೂಜಿನೊಳಗಿಟ್ಟಿದ್ದ ಕೈಯನ್ನು ಜಾಡಿಸಿ ಕಿತ್ತುಕೊಂಡು ನನ್ನ ಹಿಂದಕ್ಕೆ ನೂಕಿ ಎನೋ ಕಿರುಚುತ್ತ ಒಂದೇ ಓಟ.... ಮನೆಯಿಂದ ಹೊಲದ ಬಯಲವರೆಗೆ. ಆಗಲೆ ನನಗೂ ಶಾಕು ಹೊಡೆದಿತ್ತು. ಮುಂಗುಸಿ ನೋಡಿದ ಹಾವಿನಂತೆ ಕಂಗೆಟ್ಟು ಹೋಗಿದ್ದೆ. ಮೆಲ್ಲನೆ ಎದ್ದು ನಾನು ಹೊರಗೆ ಓಡಿದೆ. ಮುಂದೆ ಅವನೂ ಏನೂ ಹೇಳಲಿಲ್ಲ ನಾನು ನನ್ನ ಪ್ರಯೋಗದ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ.

ಇಶ್ಟಾದರು ನನ್ನ ತಲೆಯೊಳಗೆ ಕೊರೆಯುತ್ತಿದ್ದ ಹುಳ ನನ್ನ ನಿದ್ದೆ ಕೆಡಿಸಿತು. ಮಾಸ್ತರು ಹೇಳಿದ ಮಾತು ದಿಟವೊ ಸುಳ್ಳು ಎಂದು ಪಕ್ಕ ಮಾಡಿಕೊಳ್ಳ ಬೇಕಿತ್ತು. ಇನ್ನೊಮ್ಮೆ ದಿಟ ಎಂದು ಪ್ರಯೋಗದ ಮೂಲಕ ಕಂಡುಕೊಳ್ಳುವವರೆಗೆ ನನಗೆ ನೆಮ್ಮದಿ ಇಲ್ಲದಾಯಿತು. ಅಂತಹ ನಲ್ಹೊತ್ತಿಗಾಗಿ ಕಾಯತೊಡಗಿದೆ. ದಿನ ಉರುಳತೊಡಗಿದವು. ಒಂದುದಿನ ಶನಿವಾರ ಬಂತು. ಶನಿವಾರದ ಮುಂಜಾನೆಯ ಶಾಲೆ ಮುಗಿಸಿಕೊಂಡು ಹಾದಿಗುಂಟ ಕಡ್ಲೆಕಾಯಿ ಕದ್ದು ತಿನ್ನುವುದಕ್ಕೆ, ಜಿನ್ನಿನವರ ಕಬ್ಬಿನ ತೋಟಕ್ಕೆ ನುಗ್ಗಿ ಕಬ್ಬು ಕದಿಯುವುದಕ್ಕೆ ರಜ ಹೇಳಿ ಓಡೋಡಿ ಮನಗೆ ಬಂದೆ. ಆತುರ ಆತುರದಲ್ಲೇ ಒಂದೊಶ್ಟು ಕೂಳು ತಿಂದು ಒಬ್ಬನೇ ತೋಟಕ್ಕೆ ಹೋದೆ. ಯಾರಿಗೂ ಏನೂ ಹೇಳಲಿಲ್ಲ. ನನ್ನ ಗೆಳೆಯರು ಜೊತೆಗೆ ತೋಟಕ್ಕೆ ನಾವು ಬರುತ್ತೇವೆ ಎಂದು ಹಿಂದೆ ಬಿದ್ದರೂ ಅವರಿಗೆಲ್ಲಾ ಚಳ್ಳೆಹಣ್ಣು ತಿನ್ನಿಸಿ ಕಣ್ಣು ತಪ್ಪಿಸಿ ಒಬ್ಬನೇ ಹೊರಟೆ. ಆಗಲೆ ನನ್ನ ಅರಿವಿನಲ್ಲಿ ಏನೇನು ಪ್ರಯೋಗ ಮಾಡಬೇಕೆಂದು ನೂರಾರು ಪಲುಕು(ಕಲ್ಪನೆ) ಬರತೊಡಗಿದವು. ನನ್ನ ಪ್ರಯೋಗಕ್ಕೆ ಬೇಕಾದ ಮೆಟ್ಟು, ಒಣಮರದ ಹಲಗೆ, ತಂತಿ ಎಲ್ಲಾ ನನ್ನ ಹೊಲದಲ್ಲಿ ಬೇಕಾದಶ್ಟು ಸಿಗುತ್ತಿದ್ದವು. ಹೋದೆ. ನಾನೂರಹತ್ತು ವೋಲ್ಟನ ಮೂರರಲ್ಲಿ ಒಂದು ಪ್ಯೂಜ್ ಕಿತ್ತೆ. ಕಾಲಲ್ಲಿ ಮೆಟ್ಟು ಹಾಕಿಕೊಂಡು ಹಲೆಗೆಯ ಮೇಲೆ ನಿಂತೆ. ಮೆಲ್ಲ ಮೆಲ್ಲನೆ ಅಂಜಿಕೆ ಅಳುಕು ಏನೂ ಇಲ್ಲದೆ ಒಂದು ಗೇಣಿನಶ್ಟು ಉದ್ದದ ತಾಂಬ್ರದ ತಂತಿಯನ್ನು ಹಿಡಿದು ಎಲ್ಲೂ ನನಗೂ ಬೇರಾವುದೆ ವಾಹಕಕ್ಕೂ ನಂಟಾಗದಂತೆ ಎಚ್ಚರವಹಿಸುತ್ತ ಕರೆಂಟ್ ಇದ್ದ ಪ್ಯೂಜಿನ ಕಡೆ ಸೇರಿಸಿದೆ. ಶಾಕ್ ಹೊಡೆಯಲಿಲ್ಲ. ನಾನೂರ ಹತ್ತು ವೋಲ್ಟ್. ಗುಂಡಿಗೆ ತುಸು ಹೆಚ್ಚಾಯಿತು. ಆದರೆ ಒಂದುಕಡೆ ಸಂಶಯ ಬರತೊಡಗಿತು. ನಾನು ತಂತಿ ಇಟ್ಟ ಕಡೆ ಕರೆಂಟು ಇದೆಯೋ ಇಲ್ಲವೋ? ನೋಡಿ ಪಕ್ಕಮಾಡಿಕೊಳ್ಳ ಬೇಕೆನಿಸಿತು. ಟೆಸ್ಟರ್ ತೆಗೆದುಕೊಂಡು ಪ್ಯೂಜೊಳಗೆ ಇಟ್ಟೆ. ಟೆಸ್ಟರ್ ದೀಪ ಹೊತ್ತಿತು. ಅಲ್ಲಿ ಕರೆಂಟು ಇರುವುದು ದಿಟವಾಯಿತು. ಮತ್ತೊಮ್ಮೆ ದಪ್ಪ ತಂತಿ ಇಟ್ಟು ನೊಡಿದೆ. ಈಗಲೂ ಕರೆಂಟ್ ಹೊಡೆಯಲಿಲ್ಲ. ಹತ್ತಾರು ಬಾರಿ ತಂತಿ ಇಟ್ಟು ತೆಗೆದು ನೋಡಿದೆ. ಆಗ ನನಗೆ ಜಯಮೂರ್ತಿ ಸಾರು ಹೇಳಿದ ಮಾತು ದಿಟವಂದನಿಸತೊಡಗಿತು.

ಪ್ರಯೋಗದ ಒಂದನೆ ಬಾಗ ಮುಗಿಯಿತು. ತೋಟದ ಮನೆಯಿಂದ ಹೊರಬಂದೆ. ಯಾರಾದರು ಇತ್ತ ಸುಳಿದರೆ? ಹತ್ತಿರದಲ್ಲಿದ್ದ ತೆಂಗಿನ ಮರವೇರಿ ಸುತ್ತೆಲ್ಲ ನೋಡಿದೆ. ಯಾರೂ ಇಲ್ಲ. ನನ್ನ ಮುಂದಿನ ಬಾಗವಾದ ಶಾಕ್ ಹೊಡೆಯುವುದನ್ನು ಅನುಭವಿಸಿ ತಿಳಿದುಕೊಳ್ಳ ಬೇಕಿತ್ತು. ಯಾಕೋ ಈ ಮಾತು ನೆನಸಿಕೊಂಡೊಡನೆಯೇ ಎದೆ ಅಳ್ಳೊಡೆಯತೊಡಗಿತು. ಕೊಂಚ ಅಂಜಿಕೆ ಅನಿಸತೊಡಗಿತು. ಆದರೂ ಬಿಟ್ಟುಕೊಡುವ ಮನಸ್ಸಿಲ್ಲ. ಸರಿ ನೋಡೋಣವೆಂದು ಮನೆಯ ಹೊಳಹೊಕಕ್ಕೆ. ಮತ್ತೆ ಮೆಟ್ಟು ಮೆಟ್ಟಿ ತಂತಿಯನ್ನು ಪ್ಯೂಜ್ ನಲ್ಲಿ ಸಿಕ್ಕಿಸಿದೆ. ಎರಡು ಮೂರು ಬಾರಿ ಇಟ್ಟು ತೆಗೆದು ಮಾಡಿದೆ. ಇನ್ನೊಮ್ಮೆ ಟೆಸ್ಟರ್ ಇಟ್ಟೆ. ದೀಪ ಹತ್ತಿತು. ಕರೆಂಟು ಇರುವುದು ಪಕ್ಕವಾಯಿತು. ಒಣ ಹಲಗೆಯ ಮೇಲೆ ಒಂದು ಕುಡುಗೋಲನ್ನು ಇಟ್ಟೆ. ಮೆಟ್ಟು ಮೆಟ್ಟಿ ತಂತಿ ಹಿಡಿತು ಸರಿ ಎಂದು ಪ್ಯೂಜಿನಲ್ಲಿ ಇಟ್ಟೆ. ನಾನೂರ ಹತ್ತು ವೋಲ್ಟ್. ಕೊಂಚ ಏರುಪೇರಾದರೂ ಏನಾಗುವುದೋ ಗೊತ್ತಿಲ್ಲ. ಏನಾದರು ಹೆಚ್ಚು ಕಡಿಮೆಯಾದರೆ ಪ್ಯೂಜಿನಲ್ಲಿರುವ ಹರಿದಾಡುವ ನಾರೂರ ಹತ್ತು ವೋಲ್ಟನ ಕರೆಂಟ್ ಸಾವಗಿ ನನ್ನ ಹೆಣವಾಗಿಸಿಬಿಡುತ್ತದೆ. ಒಳಗೆ ಅಂಜಿಕೆ ಆದರೂ ಎಲ್ಲೋ ಇನ್ನೊಂದಡೆ ಒಣ ಕೆಚ್ಚು. ಜೊತೆಗೆ ಮೆಲ್ಲ ಕಯ್ನಡುಗಿಸುವ ತುಜು ಹೆದರಿಕೆ. ಮೈಯ ಬಿಸಿ ಮೆಲ್ಲನೆ ಕೊಂಚ ಹೆಚ್ಚಾಯಿತು. ಸಾವಿನ ನೆರಳು ತಲೆಯಲ್ಲಿ ಸುಳಿದರೂ ಬಿಡುವ ಪಿಂಡ ನಾನಲ್ಲ. ಯಾವಗಲು ಹಟಮಾರಿ ನಡವಳಿಕೆಗೆ ನನ್ನದು. ಹಟಮಾರಿತನದ ದಗ್ವಿಜಯಕ್ಕೆ ನಮ್ಮ ಮನೆಯಲ್ಲಿಯೇ ಹೆಸರುವಾಸಿಯಾದ ತ್ರಿವಿಕ್ರಮ ನಾನಾಗಿದ್ದೆ. ಈಗ ನಾನೂರ ಹತ್ತು ವೋಲ್ಟ ನನ್ನ ಮೈಯಲ್ಲಿ ಹರಿಯುತ್ತಿದೆ. ಅದರ ಯಾವುದೇ ಇರುವಿಕೆಯ ಅರಿವು ನನಗಾಗುತ್ತಿಲ್ಲ. ಕೊನೆಗೆ ಅಂಜುತ್ತಲೇ ಪಕ್ಕದಲ್ಲಿ ಇಟ್ಟಿದ್ದ ಕುಡುಗೋಲಿನ ತುದಿ ಮುಟ್ಟಿದೆ ಮುಟ್ಟಿದೊಡನೆಯೇ......

ಮರುಗಳಿಗೆಯಲ್ಲಿ ಜಯಮೂರ್ತಿ ಮಾಸ್ತರು ಹೇಳಿದ್ದ ಮಾತು ದಿವಾಗಿ ಸಿದ್ದವಾಗಿತ್ತು. ಶಾಕ್, ಎಶ್ಟು ಬಿರುಸಾದ ಶಾಕ್..! ಶಾಕ್ ನ ಜೋರಿಗೆ ಕೈಜಾಡಿಸಿದೆ. ಜಾಡಿಸಿದ ಕೈ ಅಲ್ಲೇ ಇದ್ದ ಗೋಡಗೆ ಹೊಡೆಯಿತು. ಎಂತಹ ಹೊಡೆದ. ಕೈ ಮರ ಮರ ಎನ್ನುತ್ತಿದ್ದರೆ ಸ್ವಾದೀನ ಕಳೆದುಕೊಂಡಿತೇನೋ.. ಅನ್ನಿಸುತಿತ್ತು. ಕರೆಂಟು ಹರಿದಾಟ ನಿಂತಿದ್ದರೂ ಮೈಯಲ್ಲಿನ ಜುಮು ಜುಮು ಜುಮು ನಿಂತಿರಲಿಲ್ಲ. ನಡುಕ .....ಜಿನುಗಿದ ಬೆವರು, ಜೋರಾದ ಉಸಿರಾಟ ಬೆಚ್ಚಿದ ನೋಟ. ಮೆಲ್ಲ ಮೆಲ್ಲನೆ ಸಾವರಿಸಿಕೊಂಡು ಎದ್ದು ಸುತ್ತೆಲ್ಲ ನೋಡಿದೆ. ಯಾರು ಇರಲಿಲ್ಲ. ಉಸುರಿನ ಜೋರು ಕೊಂಚ ಇಳಿಯಿತು ಅಂತು ಬದುಕುಳಿತು ಜೀವ ಎಂದುಕೊಂಡು ಹೊರಬಂದು ಬಾವಿ ಮಣ್ಣಿನ ದಿಬ್ಬದ ಮೇಲೆ ಕುಡುಗೋಲಿನಿಂದ ದಿಬ್ಬದ ಮಣ್ಣು ಹಗೆಯುತ್ತ ಕುಳಿತಿದ್ದೆ. ಮರದ ದಡದಲ್ಲೇ ಬೆಳೆದು ನಿಂತಿರುವ ಕರಿಜಾಲಿ ಹೆಮ್ಮರ ಬಾವಿಯ ಕಡೆವಾರಿ ನಿಂತಿದೆ. ನೀರಿನ ಮೇಲೆ ಚಾಚಿರುವ ಕೊಂಬೆಗಳಿಗೆ ಜೋತು ಬಿದ್ದಿರುವ ಗೀಜಗನ ಗೂಡು. ಚಿಮ್ ಚಿಮ್ ಗೀಜಗನ ಕೊರಳ ಸದ್ದು ಬರುತ್ತಿದ್ದು. ಇದ್ದಕ್ಕಿದ್ದ ಹಾಗೆ ಜೋರು ಚೀರಾಟ ಅಂಜಿಸುವಂತ ಕೊರಳ ಚೀರು, ಯಾಕೆ ಈ ಚೀರು ಎಂದುದು ಆಕಡೆ ತಲೆಯೆತ್ತಿ ನೋಡಿದೆ. ಮಾರುದ್ದದ ಕೇರೆಹಾವು ಗೀಜಗ ಹಕ್ಕಿ ಹಿಂಡಿನ ಮೇಲೆ ಬೇಟೆಯ ಸವಾರಿ ನಡೆಸಿತ್ತು. ನೋಡಿದೊಡನೆಯೇ ಹಾವಿನ ಮೇಲೆ ಕೋಪ ಬಂತು ಸಿಕ್ಕ ಕಲ್ಲು ತೆಗೆದುಕೊಂಡು ಹಾವಿನಕಡೆ ಕಲ್ಲು ಬೀಸಿತೊಡಗಿದೆ. ಕೊಂಚ ಹೊತ್ತಾದಮೇಲೆ ಅಕ್ಕ ಅಮ್ಮ ಬಟ್ಟೆ ತೊಳೆಯಲು ತೋಟಕ್ಕೆ ಬಂದರು. ನಾನೊಬ್ಬನೆ ಮರದ ಕಡೆ ಕಲ್ಲುಬೀಸುತ್ತಿದ್ದಿದ್ದು. ನನ್ನ ಜೊತೆಗೆ ಬರುವ ವಾನರ ಗೆಳೆಯ ಬಳಗ ಬೇರೆ ಇಲ್ಲ. ನನ್ನ ಮುಕ ಶಾಕ್ ಹೊಡೆತಕ್ಕೆ ಇಂಗುತಿಂದ ಮಂಗನಂತೆ ಸಂಣದಾಗಿತ್ತು. ನನ್ನ ಕೀಟಲೆ ತರಲೆ ಬಗ್ಗೆ ಚನ್ನಾಗಿ ತಿಳಿದಿದ್ದ ಅಕ್ಕ ನನ್ನ ಮುಕ ನೋಡಿದೊಡನೆಯೇ ...ಏನೋ ಅವಾಂತರ ನಡೆಸಿದ್ದಾನೆ ಎಂದು ದಿಟವಾದ ನಂಬುಗೆಯಲ್ಲಿ ಇವತ್ತಿನ ಪುರಾಣ ಏನು ಎಂದು ನನ್ನಡಗೆ ನೋಡಿ ಕೇಳುವಲ್ಲಿಗೆ. ....... ಅವನದೆಲ್ಲಿ ಮುಗಿಯುತ್ತೆ ದಿನಾ ಇದ್ದದ್ದೇ ರಾಮಾಯಣ ಬಾ ಎಂದು ಅಮ್ಮ ಅಕ್ಕನನ್ನು ಕರೆಯುವಲ್ಲಿಗೆ........

ನನ್ನಂತೆ ಈ ಬಗೆಯ ಸಾವಿನೊಡನೆ ಆಟವಾಡುವ ಪ್ರಯೋಗ ಯಾರು ಮಾಡದಿರಲೆಂದು...ಈ ಬರಹದೊಂದಿಗೆ ಬೇರೆಯವರಿಗೆ ಬರೆದು ತಿಳಿಸಲೆಂದು....ದೇವರು ನನ್ನ ಬದುಕಿಸಿದನೆಂದು ನಂಬಿ ದೇವರಲ್ಲಿ ಪಡಮಟ್ಟು ಬರಹ ಮುಗಿಸುವಲ್ಲಿಗೆ.......!


ಕುಕೂಊ...
(ಕುಮಾರಸ್ವಾಮಿ. ಕಡಾಕೊಳ್ಳ)
ಪುಣೆ

ಬೆಂಗಳೂರಿಗೆ ಹೋಗಿ ಯಾರನ್ನಾದರು ಮನೆಯ ವಿಳಾಸ ಅಥವ ದಾರಿ ಬಗ್ಗೆ ಕೇಳಿ. ನಿಮಗೆ ಸಿಗುವ ಉತ್ತರ, "ನೋಡಿ ಸಾರ್, ಸ್ಟ್ರೈಟ್ ಹೋಗಿಬಿಡಿ, ಸೆಕೆಂಡ್ ಲೆಫ್ಟ್ ತೊಗೊಳ್ಳಿ, ಅಲ್ಲಿಂದ ಜಷ್ಟ್ ಫೈವ್ ಮಿನಿಟ್ ವಾಕ್ ಮಾಡಿ ನೆಕ್ಸ್ಟ್ ಒಂದು ಸರ್ಕಲ್ ಸಿಗುತ್ತೆ. ಸರ್ಕಲ್ ನಿಂದ ರೈಟ್ ಟರ್ನ್ ತೊಗೊಂಡು ಟೂ ಮಿನಿಟ್ ವಾಕ್ ಮಾಡಿದ್ರೆ ನಿಮಗೆ ಒಂದು ಬಿ.ಎಮ್.ಟಿ.ಸಿ. ಬಸ್ ಸ್ಟಾಪ್ ಸಿಗುತ್ತೆ. ಅಲ್ಲಿಂದ ಟೂತರ್ಟಿ ನಂಬರ್ ಬಸ್ ಕ್ಯಾಚ್ ಮಾಡಿ. ಲಾಷ್ಟ ಸ್ಟಾಪೇ ಮೆಜೆಸ್ಟಿಕ್ ಸ್ಟಾಪ್. ಅಲ್ಲಿ ಕಂಡಕ್ಟರ್ ಅಥವ ಯಾರನ್ನಾದರು ಕೇಳಿ ನಿಮಗೆ ಜಯನಗರ ಫೋರ್ತ್ ಬ್ಲಾಕ್ ಗೆ ಹೋಗೋ ಬಸ್ ಬಗ್ಗೆ ಹೇಳ್ತಾರೆ. ಮೋಸ್ಟ್ಲಿ ಫೋರ್ತ್ ಫ್ಲಾಟ್ ಫಾರ್ಮ್ ನಿಂದ ಸಿಕ್ ಸ್ಟೀ ಟೂ ನಂಬರ್ ಹೋಗುತ್ತೆ ಅನಿಸುತ್ತೆ. ಜಸ್ಟ ಮೆಜೆಸ್ಟಿಕ್ ನಲ್ಲಿ ಒಮ್ಮೆ ಎನ್ ಕ್ವಾರಿ ಮಾಡಿ ಕನ್ಪಾರಮ್ ಮಾಡ್ಕೊಳ್ಳಿ"

ಏನಿದು ಯಾಕೆ ಇದನ್ನ ಇಲ್ಲಿ ಹೇಳ್ತೀನಿ ಅಂತ ಕೇಳ್ತೀರ. ಇದು "ನನ್ನ ನಾಡು, ಕನ್ನಡಿಗರ ನಾಡು ಕನ್ನಾಡು ರಾಜ್ಯಧಾನಿ ಬೆಂಗಳೂರಿನ ಕನ್ನಡಿಗರ ಬಾಯಲ್ಲಿ ನುಡಿಯುವ ಕಸ್ತೂರಿ ಕನ್ನಡ" ಮೇಲಿನ ಸಾಲಿನಲ್ಲಿ ಸಿಗುವುದು ನೂರಕ್ಕೆ ಎಂಬತ್ತರಿಂದ ತೊಂಭತ್ತರಶ್ಟು ಪದಗಳು ಅಪ್ಪಟ ಇಂಬ್ಲೀಚ್ ಪದಗಳೇ. ಕೆಲವು ಪ್ರತ್ಯಯ ಹಾಗು ಜೋಡಿಸುವ ಒರೆಗಳನ್ನು ಬಿಟ್ಟು ಮತ್ತೆಲ್ಲ ಒರೆಗಳು ಬೇರೆ ಬಾಷೆಯ ಪದಗಳೆ. ಇದು ಇವತ್ತು ಬೆಂಗಳೂರಿನ ಕನ್ನಡಿಗರ ಬಾಯಲ್ಲಿ ನಲಿಯುವ ಕನ್ನಡದ ಪಾಡು. ದಿನಪತ್ರಿಕೆಗಳಲ್ಲಿ ಇವತ್ತಿನ ದಿನಗಳಲ್ಲಿ ಕೇಳಿಬರುತ್ತಿರುವುದೇನೆಂದರೆ ಬೆಂಗಳೂರಿನಲ್ಲಿರುವ ಕನ್ನಡಿಗರ ಬಲ ಕೇವಲ ಮೂವತ್ತೆಂಟರಿಂದ ನಲವತ್ತರಷ್ಟು ಎಂದು. ಆ ಮೂವತ್ತು ನಲವತ್ತರಷ್ಟು ಕನ್ನಡಿಗರ ಬಾಯಲ್ಲಿ ನುಲಿಯುವ ಕನ್ನಡದ ಪಾಡು ಇದು. ಅಂದರೆ ನೀವೇ ಊಹಿಸಿಕೊಳ್ಳಿ ನಮ್ಮ ಕಸ್ತೂರಿ ಕನ್ನಡದ ಪಾಡನ್ನು.

ಇನ್ನೂ ಕನ್ನಡದ ಕಣ್ಣೀರಿನ ಕತೆ ಕೇಳಬೇಕೆ ಇಗೋ ಇಲ್ಲಿ ನೋಡಿ
ಜಷ್ಟ್ ಟೂ ಮಿನಿಟ್ ವಾಕ್ ಹೊಡೆದಕ್ಕೆ ಕನ್ನಡದ "ಎರಡು ಗಳಿಗೆಯ ದಾರಿ" ಇಲ್ಲವೆ "ಎರಡು ಹರದಾರಿ", " ಕಣ್ಣಳತೆಯ ದಾರಿ" ಸೆಟ್ಟಹೇರಿ ಸುಡುಗಾಡಿಗೆ ಹೋಗಲು ಕೂತಿದೆ.
"ಹಾಲಲ್ಲಿ ಸೋಫಾದ ಮೇಲೆ ಟೀವಿ ರಿಮೋಟ್ ಇದೆ" ಈ ಸಾಲಲ್ಲಿ ಇರುವ ಕನ್ನಡದ ಒರೆಗಳೆಷ್ಟು? ಮೊಗದೊಂದು "ಮಾರ್ಕೆಟಿಗೆ ಹೋಗಿ ಬೀನ್ಸ್ ತಂದು ಅದನ್ನು ವಾಶ್ ಮಾಡಿ, ಚೆನ್ನಾಗಿ ಕಟ್ ಮಾಡಿ, ಸ್ಟವ್ ಮೇಲಿಟ್ಟು ಸರಿಯಾಗಿ ಫ್ರೈ ಮಾಡಿ ತಿಂದರೆ ಏನ್ ಟೇಸ್ಟ್ ಅಂತೀರಿ... " ಜೊತೆಗೆ ಕನ್ನಡವನ್ನೂ ಸುಟ್ಟು ಬಿಡು ಎಂದೇಳಿಬಿಡೋಣವೇ ಈಗೆ ಕನ್ನಡ ಮಾತನಾಡುವವರಿಗೆ?

ಕೃಷ್ಣೇಗೌಡ್ರು ಎಲ್ಲೋ ಹೇಳಿದಂತೆ..

"ರೀ... ಮದುವೇಗೆ ಹೋಗ್ತಿದೀವಿ... ಗೋಲ್ಡ್ ಜೆವೆಲ್ಸ್... ಅದ್ರಲ್ಲೂ ಆ ದೊಡ್ಡ ನೆಕ್‌ಲೇಸ್ ಹಾಕ್ಕೋಬೇಕೂಂತ ಆಸೆ... ಅವೆಲ್ಲಾ ಇವತ್ತು ನಾನು ಹಾಕ್ಕೋತೀನಿ... ಮ್ಯಾರೇಜ್ ಹಾಲ್‌ನ ಡೋರ್‌ನಲ್ಲೇ ನಿಂತ್ಕೊಂಡು ಎಲ್ರನ್ನೂ ರಿಸೀವ್ ಮಾಡ್ತೀನಿ... ಯಾಕಂದ್ರೆ ಎಲ್ರೂ ನನ್ನ "ನೆಕ್ಲೆಸ್" ನೋಡಿಯೇ ಒಳಹೋಗ್ಬೇಕೂಂತ ಆಸೆ ಕಣ್ರೀ" ಈಗೆ ನೆಕ್, ನೆಕ್ಲೆಸ್ಸ್ ನಮ್ಮ ಬಾಯಲ್ಲಿ ಉಲಿಯುತ್ತಿದ್ದರೆ ಕನ್ನಡ ನೆಕ್ಕಿ ನೆಲಸಾರುವುದಂತೂ ದಿಟ.

ಇದು ಒಂದು ಪಾಡಾದರೆ ಕನ್ನಡದ ಇನ್ನೊಂದು ಪಾಡೇನಪ್ಪಾ ಅಂದ್ರೆ ಬೇಡವಿಲ್ಲದ ಜಾಗದಲ್ಲಿ ಸಂಸ್ಕೃತ ತುರುಕುವುದು. ಹೆಚ್ಚು ಹೆಚ್ಚು ಸಂಸ್ಕೃತ ಒರೆಗಳನ್ನ ಬಳಸುವುದನ್ನೇ ದೊಡ್ಡಸ್ತಿಕೆಯ, ಹಿರಿಮೆಯ ಸಂಕೇತವಾಗಿ ಮಾಡಿಕೊಂಡಿರುವ ಇನ್ನೊಂದು ಹಿಂಡು. ಇಂತಹ ಸಕ್ಕದ ಹಿಂದೆ ಬಿದ್ದಿರುವ ಹಿಂಡಿನಲ್ಲೊಬ್ಬನ ತಿಳಿವಂತನ ಮಾತನ್ನೊಮ್ಮೆ ಕೇಳಿ "ಮಾಜಿ ಪ್ರಧಾನ ಮಂತ್ರಿಗಳು ನಿಧನರಾದರು" ಎನ್ನುವ ಹೆಡ್ ಲೈನ್ ಬದಲಿಗೆ ‘ಮಾಜಿ ಪ್ರಧಾನ ಮಂತ್ರಿಗಳು ಸತ್ತರು’ ಎನ್ನುವ ಹೆಡ್ ಲೈನ್ ಕೊಡುವದು ಚಂದ ಕಂಡೀತೆ? ಅಯ್ಯೋ ನನ್ನ ಸುಲಿದ ಬಾಳೆ ಹಣ್ಣಿನಂತ ಕನ್ನಡವೇ..ಈ ಜಾಣನಿಗೆ ಅಪ್ಪಟ ಕನ್ನಡ ನುಡಿಬಳಸುವುದಕ್ಕೆ ಏನು ದಾಡಿ. ಅಂಜಿಕೆಯೆ? ಅಳುಕೇ? ಮುಜುಗರವೇ? ಕೀಳರಿಮೆಯೇ? ನಿಧನರಾದರು ಅನ್ನುವ ಪದಕ್ಕೆ ಕನ್ನಡದಲ್ಲಿ ನುಡಿಗಳಿಲ್ಲವೇ? ಇನ್ನೊಬ್ಬ ನನ್ನ ಗೆಣೆಯ ಹೇಳುವಂತೆ ನಿಧನರಾದರು ಎಂಬುದಕ್ಕೆ ಈಗೆಲ್ಲಾ ಒರೆಗಳನ್ನು ಬಳಸಬಹುದಲ್ಲ. ಸತ್ತರು =ತೀರಿಹೋದರು = ಕೊನೆಯುಸಿರೆದರು = ಕಣ್ಮಿದರು=ಶಿವನಡಿಸೇರಿದರು ಮುಂತಾದ ಕನ್ನಡದ ಪದಗಳೇ ಇವೆ.. ಇವನ್ನು ಬಳಸ ಬಹುದಲ್ಲ. ಇದರ ಬದಲು ಸಕ್ಕದ(ಸಂಸ್ಕೃತದ) ನಿಧನ, ಮೃತ, ದಿವಂಗತ, ಇಲ್ಲವೇ ಉರ್ದು ಪದಗಳಾದ ’ಗುಜರ್ ಜಾನ’. ’ಇಂತಿಕಾಲ್’ ಇಲ್ಲವೇ ಇಂಗ್ಲೀಶಿನ ’ಪಾಸ್ ಅವೇ’ ’ಎಕ್ಸ್‌ಪಯಿರ್ಡು’ ಯಾವುದನ್ನೇ ಬಳಸಿದರೂ ಅದು ಕನ್ನಡವಲ್ಲ... ಅದು ಅನ್ಯಬಾಶೆಯ ಪದವೇ. ಈ ಗೆಳೆಯನ ಮಾತು ದಿಟವಾಗಿ ಸರಿ ಅಲ್ಲವೇ?

ಮೇಲೇ ಹೇಳಿದ ಮಾತನ್ನೇ ಒಂದು ಮಾದರಿಯಾಗಿ ನೋಡೋಣ "ಮಾಜಿ ಪ್ರಧಾನ ಮಂತ್ರಿಗಳು ನಿಧನರಾದರು" ಎನ್ನುವ ಹೆಡ್ ಲೈನ್ ಬದಲಿಗೆ ‘ಮಾಜಿ ಪ್ರಧಾನ ಮಂತ್ರಿಗಳು ಸತ್ತರು’ ಎನ್ನುವ ಹೆಡ್ ಲೈನ್ ಕೊಡುವದು ಚಂದ ಕಂಡೀತೆ?
ಇದರಲ್ಲಿ ಚಂದ ಕಾಣುವುದಕ್ಕೂ ಕಾಣದೇ ಇರುವುದಕ್ಕೂ ಮತ್ತು ನಿಧನಕ್ಕು ಇರುವ ನಂಟೇನು? ಸಕ್ಕ ಬಲ್ಲವರಿಗೆ, ಸಕ್ಕವನ್ನು ತಾಯಿನುಡಿಯಾಗಿ ಮಾತನಾಡುವವರಿಗೆ ಸಕ್ಕದಲ್ಲಿ ನಿಧನ ಏನು ತಿಳಿಸುವುದೊ ಕನ್ನಡದ ಬಲ್ಲ ಜನಕ್ಕೆ ತೀರಿದರು, ಕಣ್ಮಿದರು, ಕೊನೆಯುಸಿರೆಳೆದರು, ಅಗಲಿದರು, ದೂರವಾದರು, ಶಿವನಡಿ ಸೇರಿದರು ಇನ್ನು ಹತ್ತು ಹಲವು ನುಡಿಗಳು ತಿಳಿಸುವುದು ಸತ್ತರು ಎನ್ನುವುದನ್ನೇ. ಇಶ್ಟೊಂದು ಕನ್ನಡ ಪದಗಳ ಗಂಟೇ ನಮ್ಮಲ್ಲಿ ಇರುವಾಗ ಬಿಂಕಕ್ಕೋ ಹೆಚ್ಚುಗಾರಿಕೆಗೊ ಸೋತು ಸಕ್ಕಕ್ಕೋ, ಇಂಬ್ಲೀಚಿಗೋ ಇನ್ಯಾವುದೋ ನುಡಿಗೆ ಮಾರು ಹೋಗಿ ಅದಕ್ಕೆ ಅಂಟಿಕೊಂಡರೆ ನಮ್ಮ ಕನ್ನಡದ ಗತಿ? ನಮ್ಮಲ್ಲಿ ತೀರಿದರು ಅನ್ನೋ ನುಡಿಗೆ ಬದಲಿ ಪದ ಇರಲಿಲ್ಲ ಅಂದರೆ ಸಕ್ಕದ ಬಗ್ಗೆ ಅವರು ಕೊಡುವ ಹಂಚಿಕೆ (ತರ್ಕ) ಒಪ್ಪಬಹುದಿತ್ತು. ಹೀಗೇ ಸಕ್ಕದ ಅಟ್ಟಹಾಸ ಮುಂದುವರಿದರೆ ನಮ್ಮ ಕನ್ನಡದ ಪದಗಳು ನಮ್ಮವು ನಮ್ಮ ಕನ್ನಡದವು ಅಂತ ನಮ್ಮ ಮುಂದಿನ ಪೀಳಿಗೆಗೆ ಗೊತ್ತಾಗುವುದು ಹೇಗೆ? ಇದು ಕೀಳರಿಮೆಯೋ ಇಲ್ಲ ಅಡಿಯಾಳುತನವೋ ಒಟ್ಟಿನಲ್ಲಿ ನಮ್ಮ ಕನ್ನಡವಂತು ಸಕ್ಕ, ಇಂಬ್ಲೀಚು ಹೊರೆಯಲ್ಲಿ ಸಿಕ್ಕು ನೆತ್ತರುಕಾರಿ ನಲುಗುತ್ತ ಬಿಕ್ಕುತ್ತಿರುವುದಂತೂ ನೂರರಶ್ಟು ದಿಟ. ಬೇರೆ ನುಡಿಗಳ ಬೇಡಿಯಿಂದ ನಾವು ಜೊತೆಗೆ ನಮ್ಮ ಕನ್ನಡವನ್ನು ಬಿಡುಗಡೆ ಗೊಳಿಸುವುದನ್ನು ನಾವು ತಿಳಿದುಕೊಂಡು ಮುನ್ನಡೆಯಬೇಕು ತಾನೆ? ಹೌದು ಹತ್ತಾರು ಜನರು ಹತ್ತಾರು ಬಗೆಯಲ್ಲಿ ತಮ್ಮ ಹಂಚಿಕೆಯನ್ನು ಕೊಡುತ್ತಾರೆ. ನುಡಿ ನಿಂತ ನೀರಾಗಬಾರದೆಂದರೆ ಬೇರೆ ನುಡಿಯ ಪದಗಳನ್ನು ಬಳಸಬೇಕು. ಆಗ ನಮ್ಮ ನುಡಿ ಬೆಳೆಯುತ್ತದೆ ಎನ್ನುವ ತರ್‍ಕ ಮುದಿಡುತ್ತಾರೆ. ಬೇರೆ ನುಡಿಯ ಪದಗಳನ್ನು ಬಳಸಲೇ ಬಾರದೆಂಬ ಗೊಡ್ಡು ನಮ್ಮದಾಗಬಾರದು. ಆದರೆ ಅದಕ್ಕೊಂದು ಎಲ್ಲೆ ಬೇಕಲ್ಲವೆ? ಈಗೇ ಬೇರೆಯದನ್ನು ಪಡೆಯುತ್ತಲೇ ಹೋದರೆ ನಮ್ಮದು ಬೆಳೆಯುವುದು ಹೇಗೆ? ನಮ್ಮದನ್ನು ಬೆಳೆಸುವ ಬದಲು ಇನ್ನೊಂದಕ್ಕೆ ಯಾವಾಗಲು ಕಯ್ಚಾಚುತ್ತ ಕೂತರೆ ನಮ್ಮದು ಬೆಳೆಯದೆ ನಿಲ್ಲುವುದಿಲ್ಲವೆ? ಆಗ ನಮ್ಮತನ ಉಳಿಯುವುದೆಲ್ಲಿ? ಅದೆಲ್ಲ ಅಲ್ಲಿರಲಿ ಕನ್ನಡದ ಕೊರಗಂತೂ ಮುಗಿಲು ಮುಟ್ಟಿದೆ ಎನ್ನುವುದನ್ನು ಕನ್ನಡಿಗನಾದವನು ಇಂದು ಅರಿಯಲೇ ಬೇಕು.

ಒಮ್ಮೆ ನಾನು ಗುರುನಾಥ ಜೋಶಿಯವರ ’ಒರೆಗಂಟು’(ಶಬ್ದಕೋಶ)ನಲ್ಲಿ ಕನ್ನಡ ಪದ ಹುಡುಕುತ್ತಿದ್ದೆ. ಅದರಲ್ಲಿ ನನಗೆ ತಿಳಿದಿದ್ದೇನಪ್ಪ ಅಂದ್ರೆ ಆ ನುಡಿಗಂಟಿನಲ್ಲಿರುವ ನೂರಕ್ಕೆ ನಲವತ್ತಕಿಂತ ಹೆಚ್ಚು ಪದಗಳು ಸಕ್ಕದ ಪದಗಳೇ. ನನಗೆ ಬೇಕೆಂದಿರುವ ಕನ್ನಡ ಒರೆ ಆ ಹೊತ್ತಿಗೆಯಲ್ಲಿ ಸಿಗುತ್ತಿಲ್ಲ, ಅತವ ಆ ಒರೆಗಂಟಿನಲ್ಲಿ ನನಗೆ ಬೇಕಾಗಿರುವ ಕನ್ನಡ ಪದ ಇಲ್ಲವೇ ಇಲ್ಲ. ನೀವೇ ಊಹಿಸಿ ನಮ್ಮ ಅಚ್ಚಕನ್ನಡದ ಪಡಿಪಾಟಲು. ಕನ್ನಡದ ನಿಗಂಟು ಎಂಬ ತಲೆನಾಮ ಹೊತ್ತು ಬೆಳಕಿಗೆ ಬಂದ ಹೊತ್ತಿಗೆಯಲ್ಲಿ ನಮಗೆ ಸಿಗುವುದು ನಲವತ್ತಕ್ಕಿಂತ ಹೆಚ್ಚಿನ ಒರೆಗಳು ಬೇರೆ ನುಡಿಯವು. ಹೆಚ್ಚಾಗಿ ಸಕ್ಕದ ಒರೆಗಳೆ ತುಂಬಿದ್ದಾರೆ. ಸಕ್ಕದ ಪದಗಳನ್ನು ಕನ್ನಡದಲ್ಲಿ ತರುವುದರಬಗ್ಗೆ, ಬಳಸುವುದರ ಬಗ್ಗೆ ಹಿಗ್ಗಿನಿಂದ ಹೇಳಿಕೊಳ್ಳುವ ಒಂದು ಗುಂಪೇ ಇದೆ. ಅವರು ಇದಕ್ಕೆ ಹೂಡುವ ಹಂಚಿಕೆ, ಕೊಡುವ ಹಂಚಿಕೆ ಏನಪ್ಪ ಅಂದರೆ ಬೇರೆ ಭಾಷೆಯ ಪದಗಳನ್ನು ನಾವು ಬಳಸುವುದರಿಂದ ನಮ್ಮ ನುಡಿ ಬೆಳೆಯುತ್ತೆ. ನಮ್ಮ ನುಡಿಯ ಸಿರಿ ಬೆಳೆಯುತ್ತೆ, ನಮ್ಮ ನುಡಿಯ ಸೊಗಸು ಬೆಳೆಯುತ್ತದೆ ಎಂದು. ಎಲ್ಲಿಯವರೆಗೆ ಬೇರೆ ನುಡಿಗಳ ಒರೆಗಳನ್ನು ಎರವಲು ಪಡೆಯುವುದು? ಎರವಲು ಪಡೆಯಲು ನಮ್ಮಲ್ಲಿ ದಿನಬಳೆಕೆಯ ದಿನಿಸು ಗುರಿತಿಸಲು, ನಮ್ಮ ಸುತ್ತಲಿರುವ ನಿಸರ್ಗವನ್ನು ಗುರುತಿಸಲು, ಪ್ರಾಣಿ, ಹಕ್ಕಿ, ಪಿಕ್ಕಿ, ನೀರು, ನಿಡಿ, ಕಳ್ಳು ಬಳ್ಳಿಗಳನ್ನು, ಕೆಲಸವನ್ನು ಗುರುತಿಸಲು ಕನ್ನಡದಲ್ಲಿ ಒರೆಗಳಿಲ್ಲವೇ? ಒರೆಸಿರಿ ನಮ್ಮಲ್ಲಿ ಇಲ್ಲವೇ? ನಾವು ತೆಗೆದುಕೊಳ್ಳುತ್ತುರುವ ಒರೆಗಳು ನಮ್ಮಲ್ಲಿ ಇಲ್ಲವೇ? ಯಾವುದಕ್ಕಾಗಿ ನಾವು ಈ ಒರೆಗಳನ್ನು ಎರವಲು ತೆಗೆದುಕೊಳ್ಳಬೇಕು? ತೆಗೆದುಕೊಂಡರೂ ಎಷ್ಟು? ಅದಕ್ಕೆ ಮೇರೆ ಬೇಡವೇ? ಎಲ್ಲೆ ಬೇಡವೇ?

ಕುವೆಂಪುರವರ ಒಂದು ಹಾಡನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಇಂತಹ ಸಕ್ಕದ ಬಲೆಯಲ್ಲಿ ಸಿಲುಕಿದ ಕನ್ನಡ ಕಬ್ಬಿಗರ ಬಳಗದಲ್ಲಿ ಬಹಳ ಜನ ಸಿಗುತ್ತಾರೆ. ಇಲ್ಲಿ ಯಾರನ್ನೂ ಹೀಯಾಳಿಸುವುದಕ್ಕಾಗಿಯಾದರು, ಯಾರನ್ನಾದರು ಕೀಳಾಗಿ ಕಾಣುವುದಕ್ಕಾಗಿ, ಯಾರನ್ನಾದರು ಅಲ್ಲಗೆಳೆಯಲಾಗಲಿ ಈ ಹಾಡನ್ನು ಮಾದರಿಯಾಗಿ ತೆಗೆದುಕೊಂಡಿಲ್ಲ. ನಮ್ಮ ನೊರೆಹಾಲಿನಂತ ಚೆಲುಗನ್ನಡ ತಿಳಿದೋ ತಿಳಿಯದೆಯೋ ಸಕ್ಕ, ಇಂಬ್ಲೀಚ್‌ನ ಹುಳಿ ಸೇರಿ ಹೇಗೆ ಒಡಕಲು ಹಾಲಾಗಿದೆ ಎಂದು ತಿಳಿದುಕೊಳ್ಳುವುದಕ್ಕೆ ಇದನ್ನು ಇಲ್ಲಿ ಹೆಸರಿಸಿದ್ದೇನೆ.


ಚಂದ್ರಮಂಚಕೆ ಬಾ, ಚಕೋರಿ!
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ!
ಚಂದ್ರಿಕಾ ಮಧುಪಾನ ಮತ್ತ
ಪೀನ ಕುಂಭ ಪಯೋದವಿತ್ತ
ವಕ್ಷ ಪರಿರಂಭನ ನಿಮಿತ್ತ
ನಿರಾವಲಂಬನ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!

ಚರಣನೂಪುರ ಕಿಂಕಿಣೀ ಕ್ವಣ
ಮದನ ಸಿಂಜಿನೀ ಜನಿತ ನಿಕ್ವಣ:
ಚಿತ್ತ ರಂಜನಿ, ತಳುವದೀ ಕ್ಷಣ
ಚಂದ್ರಮಂಚಕೆ ಬಾ, ಚಕೋರಿ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!

ತೆರೆಯ ಚಿಮ್ಮಿಸಿ, ನೊರೆಯ ಹೊಮ್ಮಿಸಿ,
ಕ್ಷೀರಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗುಮಂಚಕೆ
ಬಾ, ಚಕೋರಿ! ಬಾ, ಚಕೋರಿ!
ಎದೆ ಹಾರಿದೆ ಬಾಯಾರಿದೆ
ಚಕೋರ ಚುಂಬನ!

ನಿಕುಂಜ ರತಿವನ ಮದನಯಾಗಕೆ
ಅನಂಗ ರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚ ರಸಾಗ್ನಿ ಪಕ್ಷಿಯ
ಅಂಚಂಚು ಚುಂಬನ!
ಬಾ, ಚಕೋರಿ! ಬಾ, ಚಕೋರಿ!
ಚಂದ್ರಮಂಚಕೆ ಬಾ, ಚಕೋರಿ!

ಬಹಳ ದಿನಗಳಿಂದ ಈ ಹಾಡನ್ನು ಕೇಳಿ ನಲಿದಿದ್ದೇನೆ. ಆದರೆ ಯಾವ ಸಾಲುಗಳು, ಪದಗಳು ನನಗೆ ತಿಳಿಯುತ್ತಿರಲಿಲ್ಲ, ಅರಿವಾಗುತ್ತಿರಲಿಲ್ಲ. ಅಲ್ಲೊಂದು ಇಲ್ಲೋಂದು ಒರೆ ಬಿಟ್ಟು. ನನಗೆ ಕನ್ನಡ ಗೊತ್ತಿರುವುದೇ ಇಷ್ಟೇನೋ ಅಂದು ಕೊಂಡುಬಿಟ್ಟಿದ್ದೆ. ನನ್ನಲ್ಲೇ ಕೀಳರಿಮೆ ಬೆಳೆದು ಮುತ್ತಿಕೊಂಡಿತ್ತು. ತುಂಬಾ ಮಂದಿಗಳಲ್ಲಿ ತಿರುಳೇನೆಂದು ಕೇಳಿದರು ಸರಿಯಾಗಿ ಯಾರಿಗೂ ಗೊತ್ತಿರಲಿಲ್ಲ. ಯಾರನ್ನು ಕೇಳಿದರೂ ಕುವೆಂಪು ಬರೆದಿರುವುದು, ತುಂಬಾ ಎತ್ತರದ ಕನ್ನಡದಲ್ಲಿದೆ ಅಂತ ಜಾರಿಕೆಯ ಮಾತು ಹೇಳಿಬಿಡುತಿದ್ದರು. ಒಂದು ದಿನ ನಾನೆ ಒರೆಗಂಟು ಹಿಡಿದು ಕೂತೆ. ವೆಂಕಟ ಸುಬ್ಬಯ್ಯನವರ ಒರೆಗಂಟಿನಲ್ಲಿ ಜಾಲಾಡಿದೆ, ಕಸ್ತೂರಿ ಕನ್ನಡದಲ್ಲಿ ತಡಕಾಡಿದೆ, ಶಾಬದಿಮಠದ ಹೊತ್ತಿಗೆ ನೋಡಿದೆ, ಗುರುನಾಥಜೋಶಿಯವರ ಒರೆಗಂಟಿನಲ್ಲೂ ಹುಡುಕಾಡಿದೆ. ಅಷ್ಟೂ ಕನ್ನಡ ಒರೆಗಂಟಲ್ಲಿ ಎಷ್ಟೊಂದು ಪದಗಳೇ ಸಿಗುತ್ತಿರಲಿಲ್ಲ. ಸಿಕ್ಕರೂ ಯಾವುದು ಒರೆಯೂ ಕನ್ನಡದ್ದಲ್ಲ. ತದಬಳಿಕ ಒಂದು ದಿನ ಗೊತ್ತಾಯಿತು. ಈ ಹಾಡಲ್ಲಿ ಇರುವುದು ಕನ್ನಡ ನುಡಿಗಳಲ್ಲ ಬರಿ ಸಂಸ್ಕೃತ ಒರೆಗಳು. ಹುಡುಕಿ ನೋಡಿದಾಗ ನೂರಕ್ಕೆ ತೊಂಬತ್ತು ಪದಗಳು ಸಂಸ್ಕೃತ ಒರೆಗಳೇ. ಹೀಗೆ ಸಕ್ಕದ ಒರೆಗಳಿಂದ ಬರೆದ ಹಾಡು ಹೇಗೆ ತಿಳಿಯಬೇಕು ನಮ್ಮಂತ ಕನ್ನಡದ ಹಳ್ಳಿ ಹೈದರಿಗೆ?? ಮೇಲಿನ ಕಬ್ಬದಲ್ಲಿರುವುದು ನಲವತ್ತೆಂಟು ಸಕ್ಕದ ಒರೆಗಳು. ಮಿಕ್ಕಿದ್ದು ಎಶ್ಟು? ಅಯ್ಯೋ ನನ್ನ ಕಸ್ತೂರಿ ಕನ್ನಡವೇ..ಅಯ್ಯೋ ಕನ್ನಡದ ರಸಕವಿಯೇ ಯಾಕಪ್ಪ ಹೀಗೆ ಮಾಡಿದೆ ಅನ್ನಿಸಿಬಿಟ್ಟಿತು. ಕುವೆಂಪುರವರನ್ನು ರಸಕವಿ ಎಂದು ಒಪ್ಪಿಕೊಳ್ಳುವೆ ಇದಕ್ಕೆ ಎರಡು ಮಾತಿಲ್ಲ. ಆದರೆ ಕನ್ನಡದ ಕವಿ ಎಂದು ನಾ ಹೇಗೆ ಒಪ್ಪಿಕೊಳ್ಳಲಿ? ಅವತ್ತಿನಿಂದ ನನಗೆ ಕುವೆಂಪು ಮೇಲೆ ಇದ್ದ ಕೈವಾರ (ಅಭಿಮಾನ) ಕಿಂಚಿತ್ತಾದರು ಕಡಿಮೆ ಆಗದಿರಲಿಲ್ಲ.

ಕನ್ನಡ ನಾಡಗೀತೆ "ಜಯಭಾರತ ಜನನಿಯ ತನು ಜಾತೆ" ಇದು ಕೂಡ ಸಕ್ಕಮಯ. ನಮ್ಮ ನಾಡಗೀತೆಯನ್ನೊಮ್ಮೆ ಒಳಹೊಕ್ಕು ಬಿಡಿಸಿ ಬಿಡಿಸಿ ನೋಡಿ ಎಷ್ಟು ಕನ್ನಡ ನುಡಿಗಳು ಆ ಹಾಡಿನಲ್ಲಿ ಬಳಕೆಯಾಗಿವೆ? ಬರಿ ಹೋಳು. ನೇರವಾಗಿ ಕನ್ನಡದ ಬದಲು ಸಂಸ್ಕೃತನೆ ಓದಬಹುದಲ್ಲ!!

ಇವತ್ತು ಇಂತಹ ಸಂಸ್ಕೃತ ಪ್ರೇಮಿಗಳು ನೀಡುವ ಹಂಚಿಕೆಯಂತೆ ನಮ್ಮ ಕನ್ನಡ ನುಡಿ ಬೆಳೆಯುವುದಕ್ಕೆ ಹೊಂದಿಕೊಳ್ಳುವ ಕೆಲವು ನುಡಿ ಬಳಸುವುದರಲ್ಲಿ ಯಾವುದೇ ತೊಂದರೆ ಇಲ್ಲ. ಇವರ ಹಂಚಿಕೆ ನಾವು ಒಪ್ಪೋಣ. ನಮ್ಮದಲ್ಲದಿದ್ದರೂ ಒಳ್ಳೆಯದನ್ನು ಒಪ್ಪಿಕೊಳ್ಳುವ ಎದೆಗಾರಿಕೆ ತೋರೋಣ. ಆದರೆ ಅದೇ ನಮ್ಮ, ನಮ್ಮತನಕ್ಕೆ ಉರುಳಾದರೆ ಇನ್ನು ನಮ್ಮದು ಅನ್ನುವುದು ಏನು ಉಳಿಯುತ್ತೆ? ನಮ್ಮದು ನಮ್ಮತನ ಅನ್ನುವುದನ್ನು ನಾವು ಜಗತ್ತಿಗೆ ಹೇಗೆ ತೋರಿಸುವುದು? ನಮ್ಮತನ ತೋರಲು ನಾವು ತೊಡುವ ಬಟ್ಟೆಬರೆ, ನಮ್ಮ ನಡೆ, ನಮ್ಮ ಬದುಕು, ನಾವಾಡುವ ನುಡಿ, ನಾವು ಉಣ್ಣುವ ಕೂಳು ನಮ್ಮವಾಗಿರಬೇಕು ತಾನೆ. ನಮ್ಮತನ ತೋರಲು ಎಲ್ಲದಕ್ಕಿಂತ ಮೇಲೆ ನಿಲ್ಲುವುದು ನಾವಾಡುವ ನುಡಿ.
ಆ ನಮ್ಮ ನುಡಿಯ ಇಂದಿನ ಪಾಡು ಕೇಳಿದಿರಿ. ಇಂದು ನಮ್ಮ ಕನ್ನಡ ಅಚ್ಚ ಕನ್ನಡ ಕಂಪುಸೂಸುವ ’ಕಸ್ತೂರಿ ಕನ್ನಡ’ ವಾಗಿ ಉಳಿದಿಲ್ಲ. ಸಿಕ್ಕಸಿಕ್ಕ ಭಾಷೆಯನ್ನು ಅರಗಿಸಿಕೊಂಡು ಮುಸುರೆಯಾಗಿ ಗಬ್ಬು, ಸಿಂಡು ಸಿಂಡುನಾತವಾಗಿ ಹೋಗಿದೆ. ಸಕ್ಕದ ’ಅನ್ನ’ ಎಂಬ ಹೊರೆಗೆ ಸಿಕ್ಕ ಕನ್ನಡದ ’ಕೂಳು’ ಇನ್ನಲ್ಲವಾಗುತ್ತಿದೆ. ಪಡಸಾಲೆ ಮರೆಯಾಗಿ ಡೈನಿಂಗ್ ಹಾಲ್ ಮನೆಯಲ್ಲಿ ನುಸಿಳಿದೆ. ಊಟಕ್ಕೆ ಬದಲಾಗಿ ಮೀಲ್ಸ್, ಲಂಚ್, ದಿನ್ನರ್ ಸಪ್ಪರ್, ಹೈಟೆಕ್ ಐ.ಟಿ ಕನ್ನಡಿಗರ ಬಾಯಲ್ಲಿ, ಅಕ್ಷರ ತಿಳಿದವರಲ್ಲಿ ಉಲಿಯುತ್ತಿವೆ.
ಬೆಂಗಳೂರಿನಲ್ಲಿನ ಕನ್ನಡದ ಇನ್ನೊಂಡು ಮುಖ ನೋಡಿ. ನೀವು ಯಾವುದೇ ದಿನಿಸಿ ಅಂಗಡಿ, ಹಣ್ಣಿನ ಅಂಗಡಿ, ತಿಂಡಿ ಅಂಗಡಿಯ ಮೇಲೆ ಬರೆದಿರುವ ಹೆಸರುಗಳನ್ನು ನೋಡಿ. ನಿಮಗೆ ಸಿಗುವುದು ನೂರಕ್ಕೆ ಎಂಬತ್ತರಷ್ಟು ಇಂಬ್ಲೀಚ್ ನುಡಿಗಳು. ಉದಾಹರಣೆಗೆ ಕೆಲವನ್ನು ಇಲ್ಲಿ ಬರೆದಿರುವೆ " ಪಾಟ್ಕರ್ ಜ್ಯೂಸ್ ಅಂಡ್ ಚಾಟ್ಸ್" ,"ಬಸವೇಶ್ವರ ಕಾಂಡಿಮೆಂಟ್ಸ್ ಅಂಡ್ ಜನರಲ್ ಸ್ಟೋರ್ಸ್" "ಮಂಜುನಾಥ ಫಾಸ್ಟ್ ಫುಡ್ಸ್" " ಗುರುಶ್ರೀ ಹೋಂ ಫುಡ್ಸ್" ಅಕ್ಶರ ಮಾತ್ರ ಕನ್ನಡದ್ದು ಒರೆ ಇನ್ಯಾರದ್ದೊ. ಯಾಕೆ ಈ ಗುಲಾಮಿತನ.

ಯಾಕೆ ಈ ಹೀನತನ ಈ ಕನ್ನಡಿಗರಿಗೆ? ಇನ್ನು ದಾರಿಯ ಹೆಸರು, ಬೀದಿಯ ಹೆಸರು, ಓಣಿಯ ಹೆಸರು, ಎಲ್ಲವು ಇಂಬ್ಲೀಚ್ ಅಥವ ಸಂಸ್ಕೃತ ನುಡಿಗಳಿಂದ ಮೇಳೈಸುತ್ತಿವೆ. "ಮೆಜೆಸ್ಟಿಕ್" "ಎಮ್. ಜೀ. ರೋಡ್" "ಬ್ರಿಗೇಡ್ ರೋಡ್" " ಏರ್ ಪೋರ್ಟ ರೋಡ್" " ಹಡ್ಸನ್ ಸರ್ಕಲ್" " ಲಾಲ್ ಬಾಗ್" " ಕಬ್ಬನ್ ಪಾರ್ಕ" ನೂರಾರು ಇಂತಹ ಉದಾಹರಣೆಗೆ ಕೊಡಬಹುದು. ಕನ್ನಡ ಸೊಡರು ತುಂಬಿರುವ ಹೆಸರು "ಬಸವನಗುಡಿ" ಬುಲ್ ಟೆಂಪಲ್ಲಾಗಿದೆ. ಇಂದು ಇನ್ನೂ ಮಹಾತ್ಮಗಾಂಧಿ ಬೀದಿಗೆ ಹೋದರಂತು ನಾವಿರುವುದು ಕನ್ನಾಡಿನ ಬೆಂಗಳೂರಿನಲ್ಲೋ ಅಥವ ಅಮೇರಿಕದ ಬೆಂಗಳೂರಿನಲ್ಲೋ ಅನ್ನಿಸುವುದು.

ಶೌಚಾಲಯ, ಮಹಿಳೆ, ಪುರುಷ, ನಗರ, ಸದನ, ನಿವಾಸ, ಸೌದ, ಭವನ ಬರಿ ಸಕ್ಕದ ಒರೆಯ ಹೊರೆ. ಎಷ್ಟು ನಾಚಿಕೆಗೇಡಲ್ಲವೆ ಕನ್ನಡದ್ದು. ಶೌಚಾಲಯಕ್ಕೆ ಕಕ್ಕಸುಮನೆ, ದೊಡ್ಡಿ ಅಂತ ಬರೆಯಲು ನಮಗೆಲ್ಲ ಯಾಕಿಷ್ಟು ಕೀಳರಿಮೆ? ಪುರುಷ, ಮಹಿಳೆಗೆ ಗಂಡಸರು, ಹೆಂಗಸರು ಅಂತ ಹೇಳುವುದಕ್ಕೆ ಏನು ದಾಡಿ? ಸದನ, ನಿವಾಸಕ್ಕೆ ಬದಲು ಮನೆ, ಉಪ್ಪರಿಗಿ, ಮಾಳಿಗೆ ಅನ್ನುವುದಕ್ಕೆ ನಮ್ಮಲ್ಲರಿಗೇಕೆ ನಾಚಿಕೆ? ಇನ್ನು ನಮ್ಮ ಸರಕಾರದ ಪಾಲಿಕೆಗಳಂತು ಬಿಡಿ ಎಲ್ಲಾ ಸಂಸ್ಕೃತಮಯ. ಪಾಲಿಗೆ, ಪುರಸಭೆ, ನಗರಸಭೆ..ಇನ್ನೇನೇನೋ. ಇದಕ್ಕೆಲ್ಲ ಕಾರಣವೇನು ’ಸಕ್ಕದ ಹಿರಿದು, ಕನ್ನಡ ಕೀಳು’ ಎಂಬ ತಪ್ಪು ತಿಳುವಳಿಕೆ ಇಲ್ಲ ಸಕ್ಕದ ಒರೆ ಬಳಸುವುದರಿಂದ ಕನ್ನಡದ ಸೊಬಗು ಹೆಚ್ಚಾಗುದೆಂಬ ತಪ್ಪು ನಂಬಿಕೆ. ಇಲ್ಲವೆ ಕನ್ನಡ ಬಳಸಲು ಕೀಳರಿಮೆ. ಇಲ್ಲವೆ ನನ್ನನ್ನೇ ಮಾದರಿಯಾಗಿ ತೆಗೆದುಕೊಂಡರೆ ಕನ್ನಡದಲ್ಲಿ ಒರೆಗಳೇ ಇಲ್ಲವೆನ್ನುವ ಅರೆತಿಳುವಳಿಕೆ. ಇನ್ನು ಕೆಲವರು ಇಂತಹ ಕನ್ನಡ ಒರೆಗಳು ಯಾರಿಗೂ ಗೊತ್ತಿಲ್ಲ, ನಾವು ಬರೆದರೆ, ಬಳಸಿದರೆ ಬೇರೆಯವರಿಗೆ ತಿಳಿಯುವುದಿಲ್ಲ ಅನ್ನುವ ಹಂಚಿಕೆ ಮುಂದಿಡುತ್ತಾರೆ. ಅಯ್ಯೋ ದೇವರೆ ಬಳಸದೇ, ಬರೆಯದೇ ಹೇಗೆ ತಿಳಿಯಬೇಕು? ಬಳಕೆಗೆ ತಂದರೆ ತಾನೆ ತಿಳಿಯುವುದು! ಇದು ಒದ್ತರ ಸಕ್ಕ, ಇಂಬ್ಲೀಚ್ ಮೇಲಿನ ಒಲವಿರುವವರ ಸೋಗಲಾಡಿತನ ಎನ್ನುವುದ ದಿಟ. ಎಗ್ಗಿಲ್ಲದೆ ನುಗ್ಗಿ ಅಡರಿರುವ ಬೇರೆ ನುಡಿಯ ಪದಗಳು ನಮ್ಮ ನುಡಿಯ ಬೆಳವಣಿಗೆ ಕುಂಟಿತ ಗೊಳಿಸದೇ ಇರಲಾರವು. ಇನ್ನೂ ಅಸಯ್ಯ ಪಡುವಂತ ಉದಾಹರಣೆ ಬೇಕೆಂದರೆ ಕನ್ನಡ ನಮ್ಮ ಉಸಿರು ಎಂದೆನ್ನುವಂತೆ ತೊರಿಸಿಕೊಳ್ಳುವ "ಕನ್ನಡ ರಕ್ಷಣಾ ವೇದಿಕೆ" ಈ ಗುಂಪಿನ ಹೆಸರಲ್ಲಿ ಇರುವ ಮೂರು ಒರೆಗಳಲ್ಲಿ ಎರಡು ಒರೆ ಅಪ್ಪಟ ಸಕ್ಕ. ಇವರೇನು ಕನ್ನಡ ಉಳಿಸುವರೊ ಕನ್ನಡ ಮಾತೆಗೇ ತಿಳಿದಿರಬೇಕು. "ಕನ್ನಡ ರಕ್ಷಣಾ ವೇದಿಕೆ"ಗೆ ಬದಲಾಗಿ "ಕನ್ನಡ ಕಾವಲು ಬಳಗ" ಯಾಕಾಗಬಾರದಾಗಿತ್ತು? "ಕನ್ನಡ ಕಾವಲು ಒಡ್ಡಣ" ಎಂದು ಬಳಸಬಹುದಿತ್ತಲ್ಲವೆ? "ಕನ್ನಡ ಕಾಪು ಪಡೆ" ಎಂದೇಕೆ ಆಗಲಿಲ್ಲ?

ನಮ್ಮತನ ಹಾಳಗದಂತೆ ಬೇಕೆನಿಸುವಷ್ಟು ಸಂಸ್ಕೃತ ಹಾಗು ಇತರ ನುಡಿಯ ಪದ ಬಳಸುವುದು ಸರಿ. ಆದರೆ ಅದನ್ನೇ ಹಮ್ಮೆ ಅಂದುಕೊಳ್ಳುವುದು, ಅದನ್ನೇ ಹಿರಿತನ ಅಂದುಕೊಳ್ಳುವುದು, ಸಂಸ್ಕೃತ ಬಳಸದವರನ್ನು ಕೀಳಾಗಿ ಕಾಣುವುದು ಕನ್ನಡಿಗನಾಗಿ ಅಸಯ್ಯವಲ್ಲವೆ? ಇದು ಈಗೆ ಮುಂದುವರಿದರೆ ಇನ್ನು ನಮ್ಮ ಮುಂದಿನ ಪೀಳಿಗೆಗೆ ನಮ್ಮತನ, ಕನ್ನಡತನ ಅನ್ನುವುದನ್ನು ಈಗಿತ್ತು ಅಂತ ದಂತ ಕತೆಗಳನ್ನು ಹೇಳಬೇಕಾಗುತ್ತದೆ. ಈಗಾದರೆ ಮುಂದೆ ನಮ್ಮ ಕನ್ನಡ ಬೆಳೆಯುವುದೆಂತು? ಇಂದು ಕನ್ನಡಿಗನಾದವನು ಯೋಚಿಸಬೇಕಲ್ಲವೆ? ಒಂದು ಕಡೆ ಉದಾರಿಕರಣ, ವೈಶವಿಕರಣ, ಕೆಲಸ, ಶಿಕ್ಷಣದ ಹೆಸರಿನಲ್ಲಿ ಅಬ್ಬರಿಸಿ ಅಡರಿ ಮುತ್ತಿಕೊಳ್ಳುತ್ತಿರುವ ಇಂಬ್ಲೀಚ್. ಐಟಿ, ಬೀಟಿ, ಬಿಪಿಓ ಮಾಯಾಬಲೆಯಲ್ಲಿ ಸಿಕ್ಕಿ ಅಮೇರಿಕ, ಯುರೋಪಿನವರಂತೆ ಮಾತನಾಡುತ್ತ, ಅವರಂತೆ ಆವ ಭಾವ ಮಾಡುತ್ತ, ಅವರಂತೆ ಬಟ್ಟೆ ಬರೆ ತೊಡುತ್ತ, ಅದನ್ನೇ ಮಹಾಸಾಧನೆ ಎಂಬಂತೆ ಬೀಗುವ ಸೋಗಲಾಡಿ ನಮ್ಮವರಿಂದಲೇ ಕುಲಗೆಟ್ಟಿರುವ ಕನ್ನಡವನ್ನು ತಿಳಿಗೊಳಿಸಬೇಕು. ಪುರಾತನದು, ದೇವಭಾಷೆ, ಸನಾತನ ಭಾಷೆ ಎಂಬ ಪಟ್ಟಕಟ್ಟಿಕೊಂಡು ಮೆರೆದಾಡುತ ಸೋಗಲಾಡಿ ಸಂಸ್ಕ್ರತ, ಕನ್ನಡವನ್ನು ನುಂಗಿಹಾಕದೇ ಇರುವುದಿಲ್ಲ. ನಮ್ಮನ್ನು ನಾವು ಉಳಿಸಿಕೊಳ್ಳ ಬೇಕು, ನಮ್ಮತನ ಉಳಿಸಿಕೊಳ್ಳ ಬೇಕು. ಅದು ಇದು ಅವರದು ಇವರದು ಎಲ್ಲದ್ದನ್ನೂ ಕಲಸಿದ ಮುಸುರೆಯಾಗಿ ಅಲ್ಲ. ಕಸ್ತೂರಿ ಕನ್ನಡವಾಗಿ. ನಮ್ಮ ಕನ್ನಡ ಸಿರಿವಂತ ನುಡಿ. ಬದುಕಿಗೆ ಬೇಕಾದ ಎಲ್ಲಾ ಕೆಲಸ, ಎಲ್ಲಾ ದಿನಿಸಿಗಳನ್ನು, ಎಲ್ಲಾ ನಂಟನ್ನು ತೋರಿಸಲು ಸಾಕಾಗುವಶ್ಟು ಒರೆಸಿರಿ ನಮ್ಮಲ್ಲಿದೆ. ಹೊಸದಾಗಿ ಬಂದ ವಿಗ್ನಾನದ, ಯಂತ್ರಗಳ ಮುಂತಾದದವುಗಳ ಹೆಸರುಗಳನ್ನು ನಾವೇ ಕನ್ನಡದಲ್ಲಿ ಹುಟ್ಟುಹಾಕೋಣ. ಕನ್ನಡದಲ್ಲಿ ಸರಿಯಾದ ನುಡಿ ಹೊಂದಿಸಲಾಗದಿದ್ದರೆ ಬೇರು ನುಡಿಲ್ಲಿರುವ ಒರೆಯನ್ನೇ ಆ ನುಡಿಯಿಂದ ಎರವಲು ಪಡೆಯೋಣ. ಕನ್ನಡಕ್ಕೆ ಹೊಂದಿಕೊಳ್ಳದ ಪದವನ್ನು ನಮಗೆ ಹೊಂದಿಕೊಳ್ಳುವಂತೆ ತದ್ಬವವಾಗಿ ಬದಲಿಸಿ ಬಳಸೋಣ. ಆದರೆ ಕುರುಡರಂತೆ ಎಲ್ಲದ್ದನ್ನೂ ಒಪ್ಪಿಕೊಂಡರೆ ಎರಡುಸಾವಿರೇಡಿನ (ವರುಶದ) ಇತಿಹಾಸವಿರುವ ನಮ್ಮ ಹೆಮ್ಮೆಯ ಸಿರಿಗನ್ನಡದ ಬದುಕು ಮಣ್ಣುಗೂಡೀತು. "ಕಸ್ತೂರಿ ಕನ್ನಡ"ದ ಸವಿಗಂಪು ಕೊಳೆತ ಮುಸುರೆಯ ನಾತವಾಗಲು ನಾವು ಕಾರಣರಾಗದಂತ ಬದುಕನ್ನು ನಾವು ನಡೆಸಬೇಕು. ಆ ನಿಟ್ಟಿನಲ್ಲಿ ನಮ್ಮ ತಿಳುವಳಿಕೆಗಳನ್ನ ಹರಿದು ಬಿಡೋಣ.

ನನ್ನ ಈ ಬರಹದಲ್ಲಿ ಹಲವು ಸಕ್ಕದ ಒರೆ ಬಳಸಿರುವೆ. ಹಾಗೆ ಬಳಸಲು ನನ್ನ ಅರೆ ತಿಳುವಳಿಕೆ ಎಂಬುದು ದಿಟ. ಇಲ್ಲವೆ ಹುಟ್ಟಿದಾಗಿನಿಂದ ಈಬಗೆಯ ಕಲಬೆರೆಕೆಯದನ್ನುನ್ನು ಕಲಿತಿದ್ದರ ಬೆಳೆ ಇದು. ನನ್ನ ಮುಂದಿನ ಗುರಿ ಹೆಚ್ಚು ಹೆಚ್ಚು ಕನ್ನಡದ ಒರೆ ಬಳಸುವುದು. ಕನ್ನಡದ ಪದಗಳನ್ನು ಹುಡುಕಿ ಬಳಕೆಗೆ ತರುವುದು. ನನ್ನ ಬರಹದಲ್ಲಿ ಅವುಗಳನ್ನು ಬಳಸುವುದು. ನೂರಕ್ಕೆ ನೂರು ಬೇರೆ ನುಡಿಯ ಪದ ಬಳಸ ಬಾರದೆನ್ನುವುದು ಪೆದ್ದುತನ ಎನ್ನುವುದು ತಿಳಿದು ಜೊತೆಗೆ ಎಲ್ಲೆ ಮೀರಿದ ಬಳಕೆ ನಮ್ಮತನವನ್ನು ಮಣ್ಣುಗೂಡಿಸುತ್ತದೆ ಎನ್ನುವ ಎಚ್ಚರಿಕೆಯಲ್ಲಿ ಇರಬೇಕು. ಬೇರೆಯವರಿಗೆ ತಿಳಿಯುವುದಿಲ್ಲವೆಂದು ಇಂದು ನಾವು ಇದ್ದ ನಮ್ಮದೇ ನುಡಿಯ ಒರೆಗಳನ್ನು ಬಳಸದೇ ಇನ್ನೋಂದು ನುಡಿಯ ಒರೆ ಬಳಸಿದರೆ ನನ್ನ ಮಟ್ಟಿಗೆ ಅದು ಕನ್ನಡಕ್ಕೆ ಬಂದ ಕುತ್ತು. ಬೇರೆ ನುಡಿಯ ಒರೆಯನ್ನು ಬಳಸುವುದರಿಂದ ನಮ್ಮ ನುಡಿಯ, ನಮ್ಮತನದ ಬೆಳವಣಿಗೆ ಕುಂಟಿತವಾಗುತ್ತದೆ. ನಮ್ಮತನ ಮಣ್ಣುಮುಕ್ಕುತ್ತದೆ. ನಮ್ಮ ಕಸ್ತೂರಿ ಕನ್ನಡದ ಕಂಪು ಕಸ್ತೂರಿಯದಾಗಬೇಕಾದರೆ ನಾವು ನಮ್ಮದನ್ನು ಬೆಳಸ ಬೇಕು ಬಳಸ ಬೇಕು. ಇವತ್ತು ಕನ್ನಡನುಡಿ ಕನ್ನಡವಾಗಿ ಉಳಿದಿಲ್ಲ. ಎಲ್ಲೆಯಿಲ್ಲದೆ ಸಕ್ಕ, ಇಂಬ್ಲೀಚ್‌ಗಳ ಬಳಕೆಯಿಂದ ಕಲಬೆರೆಕೆಯಾಗಿದೆ. ಕನ್ನಡದ ಸೊಗಸು ಕನ್ನಡದಲ್ಲಿ ಇಂದು ಉಳಿದಿಲ್ಲ. ಕನ್ನಡದ ಬದುಕು ಅಮೇರಿಕ, ಯುರೋಪುಗಳ ಕುರುಡು ಅನುಕರಣೆಯಲ್ಲಿ ಸಿಲುಕಿ ಸಾಯುತ್ತಿದೆ. ಇವತ್ತು ಕನ್ನಡಕ್ಕೆ ಶಾಸ್ತ್ರಿಯ ಸ್ತಾನ ಮಾನ ಸಿಕ್ಕಿದೆ ಎಂದು ಎದೆಯುಬ್ಬಿಸಿ ಹೇಳುವಂತಿಲ್ಲ. ಶಾಸ್ತ್ರೀಯ ಸ್ತಾನ ಮಾನ ಸಿಕ್ಕೊಡನೆ ಕನ್ನಡ ಬೆಳೆದು ಬಿಡುವುದಿಲ್ಲ. ಆ ಸ್ತಾನ ಸಿಕ್ಕಿರುವುದರಿಂದ ಕನ್ನಡಕ್ಕೇನು ಒಳಿತಿಲ್ಲ. ಕೆಲವು ಪುಂಡ ಪೋಕರಿಗಳು ತಿಂದು, ಕುಡಿದು, ಕುಪ್ಪಳಿಸಿ ಮೆರೆದಾಡಲು ಅನುವಾಗಿದೆ. ಜೊತೆಗೆ ಕನ್ನಡತನ ಸಾಯುತ್ತದೆ ಅಶ್ಟೆ. ಇಂದು ತನ್ನದೇ ಒರೆಗಳನ್ನು ಬಳಸುವುದರಲ್ಲಿ ಕನ್ನಡ, ಕನ್ನಡಿಗರು ಸೋತಿದ್ದಾರೆ. ಕನ್ನಡವನ್ನು ಬದುಕಲ್ಲಿ ಬಳಸಲು ಕನ್ನಡಿಗರು ಮರೆತಿದ್ದಾರೆ. ಇಂದು ನಾವೆಲ್ಲ ಸೇರಿ ಕನ್ನಡವನ್ನು ಬೆಳಸಿ ಬಳಸ ಬೇಕಾಗಿದೆ. ಆಗ ನಮ್ಮ ಕನ್ನಡ ಕಸ್ತೂರಿ ಕನ್ನಡವಾದೀತು. ಬನ್ನಿ ಎಲ್ಲರು ಕೂಡಿ ಕೊಳಕಾಗಿರುವ ಕನ್ನಡವನ್ನು ತಿಳಿಯಾಗಿಸುವುದೇಗೆಂದು ಇಲ್ಲಿ ಮಾತನಾಡೋಣ. ನಮ್ಮದೇ ನಾಡನ್ನು ಕಟ್ಟಲು ಅಲ್ಲಿ ನಮ್ಮತನವನ್ನು ಬೆಳಸುವುದು ಹೇಗೆಂದು ಇಲ್ಲಿ ವಿಚಾರ ಮಾಡೋಣ ಬನ್ನಿ ಕನ್ನಾಡಿನ ಗೆಳೆಯರೆ.

ನನ್ನಿ
ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ
"ನಾನು ಕನ್ನಡಿಗ ಇದಕ್ಕಿಂತ ಹೆಚ್ಚುಗಾರಿಕೆ ಎನಗಿನ್ನೊಂದಿಲ್ಲ"
kadakolla@gmail.com

ಯಾವುದೀ ಪ್ರವಾಹವು?
ಮನೆಮನೆಗಳ ಕೊಚ್ಚಿ ಕೊರೆದು
ಬುಸುಗುಡುತ್ತ ಧಾವಿಸುತಿದೆ
ಯಾವುದೀ ಪ್ರವಾಹವು?

ಗುಡಿ ಗೋಪುರ ಉರುಳುತಿವೆ
ಹಳೆಯ ಪ್ರತಿಮೆಗಳುತೇಲುತಿವೆ
ದೀಪವಾರಿ, ತಂತಿ ಹರಿದು
ವಾದ್ಯವೃಂದ ನರಳುತಿದೆ

ಎದೆ ಎದೆಗಳ ನಡುವೆ ಇದ್ದ
ಸೇತುವೆಗಳು ಮುರಿದಿವೆ
ಭಯ-ಸಂಶಯ- ತಲ್ಲಣಗಳ
ಕಂದರಗಳು ತೆರೆದಿವೆ

ಮುಕ ಮುಕವೂ ಮಕವಾಡವ
ತೊಟ್ಟು ನಿಂತ ಹಾಗಿದೆ
ಆಡುತಿರುವ ಮಾತಿನೊಳಗೆ
ಹೃದಯ ಕಾಣದಾಗಿದೆ

ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ : ಗೋಡೆ
ಹಾಡಿದವರು: ಅಶ್ವತ್

** ಅವಾಹನೆ **

ಎಲ್ಲೋ ದೂರದಿ ಜಿನುಗುವ ಹನಿಗಳೆ
ಬನ್ನಿ ಬನ್ನಿ ಬಿರಿಮಳೆಯಾಗಿ
ತುಂಬಲಿ ತುಳುಕಲಿ ಬತ್ತಿದ ಹೊಳೆಕೆರೆ
ಹೊಸ ಉಸಿರೇಳಲಿ ನವುರಾಗಿ!

ಎಲ್ಲೋ ದೂರದಿ ಜಿನುಗುವ ದನಿಗಳೆ
ಬನ್ನಿ ಬನ್ನಿ ರಸಗೀತೆಗಳಾಗಿ,
ಮೌನದಿ ಮಲಗಿದ ವಾದ್ಯವೃಂದಗಳ
ಮೇಲಾಡಿ ಚೆಲು ಬೆರಳಾಗಿ!

ಎಲ್ಲೋ ದೂರದಿ ಮಿನುಗುವ ಕಿಡಿಗಳೆ
ಬನ್ನಿ ಬನ್ನಿ ಹೊಂಬೋಗರಾಗಿ
ಹಣತೆ ಹಣತೆಗಳ ತುಟಿಯೊಳು ಕುಡಿನಗೆ
ಮಿಂಚಿಸಿ ಒಳ ಹೊರಗನು ಬೆಳಗಿ

ಎಲ್ಲೋ ದೂರದಿ ಚಿಕ್ಕಿ ಗೆಜ್ಜೆಗಳ
ಕಟ್ಟಿ ನರ್ತಿಸುವ ಹೆಜ್ಜೆಗಳೆ,
ಬನ್ನಿ ನನ್ನೆದೆಯ ಲಾಸ್ಯವನಾಡಿರಿ
ಚಿಮ್ಮಲಿ ನಲಿವಿನ ಬುಗ್ಗೆಗಳು

ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ/ಕವನ ಸಂಕಲನ : ಕಾರ್ತೀಕ

ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೇ
ಕಂಬನಿಯ ತಲಾತಲದಿ
ನಂದುತಿಹ ಕಿಡಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹ್ರುದಯಕೆ

ನೀಲಿಯಲ್ಲಿ ಮಯ್ಯಿಲ್ಲದೆ
ತೇಲಾಡುವ ಹನಿಗಳೇ
ಬಾಯಿಲ್ಲದ ಮವ್ನದಲ್ಲಿ
ಅಲೆಯಂತಿಹ ದನಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹ್ರುದಯಕೆ

ಜಲವಿಲ್ಲದ ನೆಲದಲ್ಲಿ
ಕಮರುತಿರುವ ಕುಡಿಗಳೇ
ಬಿರುಬಿಸಿಲಿನ ತುಳಿತದಲಿ
ಸೊರಗಿ ಹೋದ ನುಡಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹ್ರುದಯಕೆ

ಶ್ರುತಿಯಿಲ್ಲದ ವಾದ್ಯದಲ್ಲಿ
ಗತಿಯಿಲ್ಲದ ಸ್ವರಗಳೇ
ಬಿರುಗಾಳಿಗೆ ಗರಿಯುದರಿದ
ಹೊಂಗನಿಸಿನ ಮರಿಗಳೇ
ಉಸಿರನಿಡುವೆ
ಹೆಸರ ಕೊಡುವೆ


ಬನ್ನಿ ನನ್ನ ಹ್ರುದಯಕೆಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ/ಕವನ ಸಂಕಲನ : ಪ್ರೀತಿ ಇಲ್ಲದ ಮೇಲೆ
ಹಾಡಿದವರು: ಸಿ. ಅಶ್ವತ್


Older Posts

Blogger Template by Blogcrowds